– ರಾಷ್ಟ್ರದ್ರೋಹದ ಕೇಸ್ ಹಾಕಿ ಜೈಲಿಗಟ್ಟಿ
ಮಂಗಳೂರು: ಪಾದರಾಯನಪುರದಲ್ಲಿ ಕಾನೂನು ಭಂಜಕರಿಂದ ಆದ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಮಾದರಿಯಲ್ಲಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್ಗೆ ಜಾತಿ, ಮತ ಇಲ್ಲ. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಆದರೆ ಪಾದರಾಯನಪುರದಲ್ಲಿ ಕಾನೂನು ಭಂಜಕರಿಂದ ಈ ಘಟನೆ ನಡೆದಿದ್ದು, ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಈ ಕುರಿತು ಗೃಹಸಚಿವರ ಜೊತೆಗೆ ಮಾತನಾಡಿದ್ದೇನೆ. ಪಾದರಾಯನಪುರದಲ್ಲಿ ಇನ್ನು ಅಂತಹ ಘಟನೆ ನಡೆಯಬಾರದು. ಕೃತ್ಯ ಎಸಗಿದವರ ವಿರುದ್ಧ ರಾಷ್ಟ್ರದ್ರೋಹದ ಕೇಸ್ ಹಾಕಿ ಜೈಲಿಗಟ್ಟಿ ಎಂದು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಮಾದರಿಯಲ್ಲಿ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ. ಸರ್ಕಾರಿ ಅಧಿಕಾರಿಗಳ ವಿರುದ್ಧ ಹೋಗಿದ್ದು ಖಂಡನೀಯ. ಘಟನೆ ಹಿಂದೆ ಯಾರೇ ಇರಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಕಿಡಿಕಾರಿದ್ದಾರೆ.
ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ 56 ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಗುಂಪು ಗುಂಪಾಗಿ ಕರ್ತವ್ಯ ನಿರತ ಪೊಲೀಸರ ಮೇಲೆ ಪಾದರಾಯನಪುರದ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಭಾನುವಾರ ಕೊರೊನಾ ಶಂಕಿತ 58 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪುಂಡರ ಜೀವ ರಕ್ಷಣೆಗೆ ಬಂದವರ ಮೇಲೆಯೇ ದಾಳಿ ನಡೆಸಿದ್ದಾರೆ. ಘಟನೆ ವಿಕೋಪ ತಿರುಗುತ್ತಿದ್ದಂತೆ ಪಾದರಾಯನಪುರಕ್ಕೆ ಪೊಲೀಸರ ನಿಯೋಗವೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕರ್ತವ್ಯನಿರತ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಸುಮಾರು 56 ಜನರನ್ನು ರಾತ್ರಿಯೇ ಪೊಲೀಸರು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ. ಅಲ್ಲದೆ ಇಂದು ಬೆಳಗ್ಗೆ ಸಹ ಕೆಲವರನ್ನು ಬಂಧಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ 10 ಕೆಎಸ್ಆರ್ ಪಿ ತುಕಡಿ ಮತ್ತು 220 ಪೊಲೀಸರನ್ನು ಪಾದರಾಯನಪುರದಲ್ಲಿ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಮುಕ್ಕಾಂ ಹೂಡಿದ್ದಾರೆ.