ವಿಜಯಪುರ: ನಗರದಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಪ್ರಚಾರ ಮಾಡಿದ್ದಾರೆ. ಅಂಬರೀಶ್ ಅವರಿಗೆ ಒಬ್ಬರೆ ಹೆಂಡ್ತಿ ವಿಚಾರ ಪ್ರಶ್ನಿಸುತ್ತಿದ್ದಂತೆ ತಾರಾ ನಿಮಗೆ ಯಾಕೆ ಅನುಮಾನ ಇದೆ ಎಂದರು. ಅಲ್ಲದೇ ಅಯ್ಯೋ ಚಿ.. ಚಿ.. ನನಗೆ ಅದರ ಬಗ್ಗೆ ಗೊತ್ತಿಲ್ಲವೆಂದು ಮಾಧ್ಯಮದ ಮುಂದೆ ತಾರಾ ಕೈ ಮುಗಿದರು.
ನಗರದಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಕಡೆಗೆ ಎಲ್ಲರ ಗಮನವಿದೆ. ಅದು ಚಿತ್ರರಂಗಕ್ಕೆ ಇರುವ ಶಕ್ತಿ. ಇಬ್ಬರು ನಟರು ಆರೋಪ ಮಾಡಬಾರದು ಎಂದು ಸಲಹೆ ನೀಡಿದರು. ಇನ್ನು ನಿಖಿಲ್ ಕುಮಾರಸ್ವಾಮಿ ಹಾಗೂ ಯಶ್ ಚಿತ್ರರಂಗದ ಕುಟುಂಬದವರು. ಒಬ್ಬರಿಗೆ ಒಬ್ಬರು ಬೈದುಕೊಂಡರೆ ನಮ್ಮ ಮನೆಗೆ ನಾವೇ ಬೈದುಕೊಂಡ ಹಾಗೆ ಎಂದರು.
ಇನ್ನು ಮಾಧ್ಯಮದವರ ಮೇಲೆ ಹಲ್ಲೆ ನಡೆದರೆ ನಾವು ಜವಾಬ್ದಾರ ಅಲ್ಲ ಎನ್ನುವ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ, ಸಿಎಂ ಎಚ್ಡಿಕೆ ಹೇಳಿಕೆ ಖಂಡನೀಯ. ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಸಿಎಂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದರು.
ತಾರಾ ಅವರು ನಗರದ ಗಾಂಧಿಚೌಕ್, ಸರಾಫ ಬಜಾರ್, ಕಿರಾಣಾ ಬಾಜಾರ್ ಸೇರಿದಂತೆ ಹಲವೆಡೆ ತೆರಳಿ ಮತಯಾಚನೆ ಮಾಡಿದರು.