ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ನಿಂದ ಕುಟುಂಬ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬವನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿ, ಲೇವಡಿ ಮಾಡಿ ಪೋಸ್ಟ್ ಗಳನ್ನು ಕೂಡ ಹಾಕುತ್ತಿದ್ದಾರೆ.
ಕಳೆದ 25 ವರ್ಷಗಳಿಂದ ಪಕ್ಷಕ್ಕೋಸ್ಕರ ದುಡಿದು, ಬೆವರು, ರಕ್ತ ಸುರಿಸಿ ಹೋರಾಡಿದ ನನ್ನ ಜೆಡಿಎಸ್ ಅಣ್ತಮ್ಮಂದಿರ ಆತ್ಮಕ್ಕೆ ಶಾಂತಿ ಸಿಗಲಿ. ಮಂಡ್ಯ ಜಿಲ್ಲೆ ಸ್ವಾಭಿಮಾನ ಅಡವಿಟ್ಟ ನಿಮ್ಮ ಜನ್ಮಕ್ಕೆ ಧಿಕ್ಕಾರವಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಹಾಗೂ ಮಂಡ್ಯದ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಲೋಕಸಭಾ ಚುನಾವನೆಯಲ್ಲಿ ಆಕಸ್ಮಾತ್ ವಲಸಿಗ ಗೆದ್ದರೆ ನಿಮ್ಮನ್ನ ಮಂಡ್ಯ ಇತಿಹಾಸ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಕೆಲವರು ಬರೆದಿದ್ದರೆ, ಇನ್ನೂ ಕೆಲವರು ಸದ್ಯ ನಮ್ ಪುಣ್ಯ, ನಮ್ ಗೌಡ್ರು ಕ್ರಿಕೆಟ್ ಆಡಕ್ಕೆ ಕಲಿತು ಇಂಡಿಯಾ ಕ್ರಿಕೆಟ್ ಟೀಂ ಸೇರಿಲ್ಲ. ಇಲ್ಲಾಂದಿದ್ದರೆ ಇಷ್ಟೊತ್ತಿಗೆ ಫುಲ್ ಟೀಮ್ ಅಲ್ಲಿ ಅವರ ಕುಟುಂಬದವರೇ ಇರುತ್ತಿದ್ದರು ಎಂದು ಟೀಕಿಸಿದ್ದಾರೆ.
ಕೆಲವರು ಮೊದಲೆಲ್ಲ ಮಂಡ್ಯ ಬಸ್ ನಿಲ್ದಾಣದಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಎಂದು ಕೂಗುತ್ತಿದ್ದರು. ಈಗ ಜೆಡಿಎಸ್ ಅಂದಾಭಿಮಾನಿಗಳು ಮಂಡ್ಯಕ್ಕೆ ನಿಖಿಲ್, ಮದ್ದೂರು ಡಿಸಿ ತಮ್ಮಣ್ಣ, ಚೆನ್ನಪಟ್ಟಣ ಕುಮಾರಸ್ವಾಮಿ, ರಾಮನಗರ ಅನಿತಾ ಕುಮಾರಸ್ವಾಮಿ, ಬೆಂಗಳೂರು ದೇವೇಗೌಡ್ರು ಎಂದು ಕೂಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆ ಟೀಕೆ ಮಾಡಿದವರಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೆಡಿಎಸ್ಗೆ ಬಿಜೆಪಿ ಟೀಕಿಸುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv