ಬೆಂಗಳೂರು: ವಿಶ್ವಾಸಮತ ಯಾಚನೆಯ ಚರ್ಚೆಯ ವೇಳೆ ವಿರೋಧ ಪಕ್ಷಗಳು ತಮ್ಮ ಕಾಲೆಳೆದರೂ ಬಿಜೆಪಿ ಶಾಸಕರು ಮೌನಕ್ಕೆ ಶರಣಾಗಿದ್ದಾರೆ.
ಕೋಟಿ ಕೋಟಿಯ ಆಫರ್ ನೀಡಿರುವ ಆರೋಪಗಳ ಸುರಿಮಳೆಗೈದ್ರೂ ಬಿಜೆಪಿಯವರು ಮಾತ್ರ ಯಾವುದಕ್ಕೂ ಅಡ್ಡಿಪಡಿಸದೆದೇ ಮೌನವಾಗಿ ಆಲಿಸಿದ್ದಾರೆ. ಗುರುವಾರ ಸ್ವೀಕರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಮಾಧುಸ್ವಾಮಿಯವರು ಇಂದು ಪ್ರತಿಕ್ರಿಯೆ ನೀಡಲು ಮುಂದಾದಾಗ ಬಿಜೆಪಿ ನಾಯಕರು ಅವರನ್ನು ಸಮಾಧಾನ ಮಾಡಿದರು.
ನನ್ನನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು. ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರು ಸೇರಿ ನಮ್ಮ ಮನೆಗೆ ನೇರವಾಗಿ 5 ಕೋಟಿ ತಂದು ಕೊಟ್ಟರು. ಆಗ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದು ಶಾಸಕ ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು. ಈ ವೇಳೆ ಕೃಷ್ಣಬೈರೈಗೌಡ ಮಾತನಾಡಿ, ಶಾಸಕರ ಆರೋಪ ಸುಳ್ಳಾದರೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲಿ. ಹಕ್ಕು ಚ್ಯುತಿ ಮಂಡಿಸಲಿ ಎಂದು ಹೇಳಿದಾಗಲೂ ಕಮಲ ಶಾಸಕರು ಮೌನವಾಗಿ ಆಲಿಸುತ್ತಿದ್ದರು.
ವಿಧಾನಸಭೆಯಲ್ಲಿ ಮಾತು ಆರಂಭಿಸಿದ್ದ ಸಿಎಂ ಅವರು, ತಮ್ಮ ರಾಜಕೀಯ ಜೀವನದ ಬಗ್ಗೆ ಸುಧೀರ್ಘವಾಗಿ ಮಾತಾನಾಡಿದರು. ಮುಖ್ಯಮಂತ್ರಿ ಯಾರಾಗ್ತಾರೋ, ಯಡಿಯೂರಪ್ಪ ಸಿಎಂ ಆಗ್ತಾರೋ ಇದೆಲ್ಲ ಅಪ್ರಸ್ತುತ ಇಲ್ಲಿ. ಆದರೆ ರಾಜಕೀಯ ಅಣಕವಾಗಬಾರದು. ಇತಿಹಾಸದ ಪುಟಗಳಿಗೆ ಸೇರ್ತೀವಿ ನಾವು ಎಂದು ಹೇಳಿದರು.
ಇದೇ ವೇಳೆ ಶಾಸಕ ರೇಣುಕಾಚಾರ್ಯ ಕಾಲೆಳೆದ ಸಿಎಂ, ಅಲ್ನೋಡಿ ಶಾಸಕರನ್ನು ರೇಣುಕಾಚಾರ್ಯ ಕಾಯುತ್ತಿದ್ದಾರೆ. ಯಾರಾದ್ರೂ ಎಲ್ಲಾದ್ರೂ ಹೋಗುತ್ತಾರೋ ಎಂದು ಇದೇ ರೇಣುಕಾಚಾರ್ಯ ಬಿಎಸ್ವೈ ಬಗ್ಗೆ ಎಷ್ಟೆಲ್ಲ ಮಾತಾನಾಡಿಲ್ಲ ಹೇಳಿ ಎಂದು ಕೆಣಕಿದ್ದಾರೆ. ಆದರೂ ಬಿಜೆಪಿಯವರು ಮರು ಮಾತನಾಡದೆ ಸುಮ್ಮನಾಗಿದ್ದರು.
ರೇಣುಕಾಚಾರ್ಯ ಅವರಿಗೆ ಪದೇ ಪದೇ ಟಾಂಗ್ ಕೊಟ್ಟ ಸಿಎಂ, ರೇವಣ್ಣನಿಗೆ ನಿಂಬೆಹಣ್ಣು, ದೇವಸ್ಥಾನಕ್ಕೆ ಹೋಗ್ತಾರೆ, ಮಾಟಮಂತ್ರ ಮಾಡುತ್ತಾರೆ ಎಂದು ಲೇವಡಿ ಮಾಡುತ್ತಾರೆ. ನಮ್ಮದು ದೇವರು ನಂಬುವ ಕುಟುಂಬ. ಮಾಟ ಮಂತ್ರ ಮಾಡುವ ಕುಟುಂಬವಲ್ಲ. ಆಂಜನೇಯ ದೇವಸ್ಥಾನ ಕ್ಕೆ ಹೋದಾಗ ನಿಂಬೆಹಣ್ಣು ಕೊಡಲ್ವೇ, ಅದನ್ನು ಮಾಟ ಮಂತ್ರ ಅನ್ನೋಕಾಗುತ್ತಾ ಎಂದು ಸಿಎಂ ಬಿಜೆಪಿಯವರಿಗೆ ಪ್ರಶ್ನೆ ಮಾಡಿದರು.
ನಮ್ಮದು ಆ ವಂಶವಲ್ಲ. ಬಿಜೆಪಿಯವರು ದೇವರ ಹೆಸರು ರಾಮನ ಹೆಸರಿನಲ್ಲಿ ಮತ ಕೇಳ್ತೀರಿ. ನಿಂಬೆಹಣ್ಣು ಮಾಟ ಮಂತ್ರದಿಂದ ಸರ್ಕಾರ ಉಳಿಸೋದಾದ್ರೇ ಚುನಾವಣೆ ಯಾಕೆ ಬೇಕು, ಜನರ ಬಳಿ ಯಾಕೆ ಹೋಗಬೇಕು. ಇಲ್ಲಿಂದಲೇ ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಬಹುದಲ್ಲವೇ ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ.
ನಾವು ಬರ್ತೀನಿ ಹೋಗುತ್ತೇನೆ. ಸಿಎಂ ಸ್ಥಾನ ಶಾಶ್ವತಲ್ಲ ಎಂದು ಸಿಎಂ ಪದೇ ಪದೇ ಪುನಾರುಚ್ಚರಿಸಿದರು. ಹಳೆ ಬಿಜೆಪಿ ಗಲಾಟೆ, ರೇಣುಕಾಚಾರ್ಯ ವಿರುದ್ಧ ಶಾಸಕರ ಗಲಾಟೆ ಬಗ್ಗೆಯೂ ಸಿಎಂ ಕಿಚಾಯಿಸಿದರು. ಆದರೂ ಬಿಜೆಪಿ ಮಾತ್ರ ತುಟಿಕ್ ಪಿಟಿಕ್ ಅಂದಿಲ್ಲ. ಮೈತ್ರಿ ನಾಯಕರ ಚರ್ಚೆಗಳನ್ನು ಮೌನವಾಗಿಯೇ ಆಲಿಸುತ್ತಿದ್ದಾರೆ.