ಬೆಂಗಳೂರು: ನೆಹರು ಕುಟುಂಬದಿಂದ ದೇಶ ಹಾಳಾಗಿದೆ ಅನ್ನೋದು ಸರಿಯಲ್ಲ. ಅವರ ಪಂಚ ವಾರ್ಷಿಕ ಯೋಜನೆಗಳನ್ನ ಸರಿಯಾಗಿ ಓದಿಕೊಳ್ಳಲಿ ಎಂದು ಬಿಜೆಪಿಯ ಮುಖಂಡ ಗೋವಿಂದ ಕಾರಜೋಳಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿಯನ್ನ ರೂಪಿಸಲಿ. ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳುತ್ತವೆ. ರಾಜ್ಯ ಸರ್ಕಾರಗಳು ಸಹಕಾರಿ ಸಂಘಗಳು ಸಾಲ ಮನ್ನಾ ಮಾಡಿದ್ರೆ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡದಿದ್ರೆ ತಾರತಮ್ಯ ಆಗುತ್ತದೆ ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಒಂದು ನೀತಿ ತರಲು ಸಾಧ್ಯವಿಲ್ಲವೇ? ರೆಡ್ ಲೈಟ್ ತೆಗೆದಿದ್ದಕ್ಕೆ ನನಗಷ್ಟೇ ಅಲ್ಲ ಬಿಜೆಪಿಯವರನ್ನು ಸೇರಿ ತುಂಬಾ ಜನರಿಗೆ ಬೇಸರ ಆಗಿದೆ. ಆದ್ರೆ ಕೇಂದ್ರ ಸರ್ಕಾರ ಆದೇಶ ಮಾಡಿದ ತಕ್ಷಣ ರೆಡ್ ಲೈಟ್ ತೆಗೆದವನು ನಾನೇ ಮೊದಲಿಗ ಎಂದರು.
ನಾಳೆ ರಾಹುಲ್ ರಾಜ್ಯಕ್ಕೆ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಮಧ್ಯಾಹ್ನ 12.45 ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ಅನ್ಸಾರಿ ಕೂಡ ಆಗಮಿಸುತ್ತಿದ್ದಾರೆ. ದೆಹಲಿಯಿಂದ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಬಳಿಕ ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ತದನಂತರ ರಾಹುಲ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸರ್ವಸದಸ್ಯರ ಸಭೆ ನಡೆಯಲಿದೆ ಅಂತಾ ಮಾಹಿತಿ ನೀಡಿದ್ರು.
ಇದನ್ನೂ ಓದಿ: ನೆಹರೂಮನೆತನದವರಿಂದ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದೆ: ಗೋವಿಂದ ಕಾರಜೋಳ
ಪಕ್ಷ ಸಜ್ಜುಗೊಳಿಸುವತ್ತ ಕಾಂಗ್ರೆಸ್ ಚಿತ್ತ: 2018 ರ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವ ಸಲುವಾಗಿ ನಾಳೆ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿಸೋ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನಿಸಲಾಗುವುದು ಅಂತಾ ಹೇಳಿದ್ರು.
ಅಮಿತ್ ಷಾ ವಿರುದ್ಧ ಗರಂ: ಗಾಂಧಿ ಜಾತಿ ಹೆಸರು ಹಿಡಿದು ಮಾತಾಡಿದ್ದಾರೆ. ಇದು ಅಕ್ಷಮ್ಯ, ಖಂಡನಾರ್ಹ ಮಾತು. ಗಾಂಧಿ ಇಡೀ ವಿಶ್ವದ ನಾಯಕರು, ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ. ಮಹಾತ್ಮ ಗಾಂಧಿಗೆ ಮತ್ತೊಬ್ಬರನ್ನ ಹೋಲಿಸಲಾಗದು. ಗಾಂಧೀಜಿ ಕುರಿತ ಅಮಿತ್ ಷಾ ಮಾತು ದೇಶಕ್ಕೆ ಮಾಡಿದ ಅಪಮಾನ. ಇದು ಅಮಿತ್ ಷಾ ಮನಸ್ಥಿತಿ ತೋರಿಸುತ್ತೆ ಅಂತಾ ಕಿಡಿಕಾರಿದ್ದಾರೆ.