ನವದೆಹಲಿ: ಖಾಸಗಿ ನ್ಯೂಸ್ ಚಾನೆಲ್ವೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕೀಯ ಚರ್ಚೆ ವೇಳೆ ಬಿಜೆಪಿ ಹಾಗೂ ಸಮಾಜವಾದಿ ಪಾರ್ಟಿ(ಎಸ್ಪಿ) ನಾಯಕರು ಕಿತ್ತಾಡಿಕೊಂಡಿದ್ದಾರೆ.
ಶನಿವಾರ ದೆಹಲಿಯ ಖಾಸಗಿ ನ್ಯೂಸ್ ಚಾನೆಲ್ ವೊಂದರ ಸ್ಟುಡಿಯೋದಲ್ಲಿ ಬಿಜೆಪಿ ಹಾಗೂ ಎಸ್ಪಿ ನಾಯಕರು ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿತ್ತು. ಈ ವೇಳೆ ಬಿಜೆಪಿಯ ಗೌರವ್ ಭಾಟಿಯಾ ಹಾಗೂ ಎಸ್ಪಿಯ ಅನುರಾಗ್ ಭದೋರಿಯಾ ನಡುವೆ ತೀವ್ರ ವಾಕ್ ಸಮರ ಏರ್ಪಟ್ಟಿತ್ತು.
https://twitter.com/NaaPaak/status/1071439783027589120
ಈ ವೇಳೆ ಚರ್ಚೆ ವಿಕೋಪಕ್ಕೆ ತಿರುಗಿ ನೇರಪ್ರಸಾರದಲ್ಲಿಯೇ ಅನುರಾಗ್ ಗೌರವ್ರನ್ನು ತಳ್ಳಿದ್ದಾರೆ. ನಂತರ ಸಿಟ್ಟಿಗೆದ್ದ ಇಬ್ಬರೂ ಪರಸ್ಪರ ಕೈ ಮಿಲಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಚಾನೆಲ್ ಸಿಬ್ಬಂದಿ ಇಬ್ಬರನ್ನು ಸಮಾಧಾನ ಪಡಿಸಿದ್ದರು.
ಇಬ್ಬರು ನಾಯಕರು ನೇರಪ್ರಸಾರದಲ್ಲೇ ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೂಡಲೇ ಗೌರವ್ ಎಸ್ಪಿ ಮುಖಂಡ ಅನುರಾಗ್ ಮೇಲೆ ದೂರನ್ನು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುರಾಗ್ ರನ್ನು ವಶಕ್ಕೆಪಡೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ, ನೋಲ್ಡಾದ ಸೆಕ್ಟರ್ 16-ಎ ದಲ್ಲಿರುವ ಖಾಸಗಿ ಸುದ್ದಿ ವಾಹಿನಿಯ ಸ್ಟುಡಿಯೋದಲ್ಲಿ ರಾಜಕೀಯ ನಾಯಕರು ಜಗಳವಾಡಿಕೊಂಡಿದ್ದರು. ಈ ಸಂಬಂಧ ಬಿಜೆಪಿ ವಕ್ತಾರ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆ ಅನುರಾಗ್ರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅಲ್ಲದೇ ಸ್ಟುಡಿಯೋದಲ್ಲಾದ ಜಗಳದ ವಿಡಿಯೋವನ್ನು ನೀಡುವಂತೆ ಸುದ್ದಿವಾಹಿನಿಗೆ ಆದೇಶಿದ್ದೇವೆಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv