ಉಡುಪಿ: ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಜಿಲ್ಲೆಯ ಕಾರ್ಕಳದಲ್ಲಿ ಬಿಜೆಪಿ ಧರಣಿ ಸತ್ಯಾಗ್ರಹ ಮಾಡಿದೆ.
ಕಾರ್ಕಳ ತಾಲೂಕಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, 24 ಗಂಟೆಗಳ ಧರಣಿ ಸತ್ಯಾಗ್ರಹ ಮಾಡಿದೆ. ಅಹೋರಾತ್ರಿ ಧರಣಿ ಕುಳಿತ ಜಿಲ್ಲಾ ಬಿಜೆಪಿ ವೀರಪ್ಪ ಮೊಯ್ಲಿ ವಿರುದ್ಧ ಹರಿಹಾಯ್ದಿದೆ.
ಕಾರ್ಕಳ ಮೂಲದ ಮಾಜಿ ಸಿಎಂ, ಸಂಸದ ವೀರಪ್ಪ ಮೊಯ್ಲಿ 6 ಬಾರಿ ಕಾರ್ಕಳದಿಂದ ಶಾಸಕರಾಗಿ ಒಂದು ಬಾರಿ ಸಿಎಂ ಆಗಿದ್ದಾರೆ. ಆದ್ರೆ ಅಧಿಕಾರದಲ್ಲಿದ್ದಾಗ ಮೊಯ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿದ್ದ ಗುದ್ದಲಿ ಪೂಜೆಗಳು, ಶಿಲಾನ್ಯಾಸಗಳ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 2014 ರಲ್ಲಿ ಶಿಲಾನ್ಯಾಸ ಮಾಡಿದ್ದ ಪುರಭವನ ಕಾಣೆಯಾಗಿದೆ. ಪುರಭವನ ಹುಡುಕಿಕೊಡಿ ಅಂತ ಬಿಜೆಪಿ ಪ್ರತಿಭಟನೆ ನಡೆಸಿತು. ಇನ್ನೂ ಕಾಮಗಾರಿಗಳು ಆರಂಭವಾಗದ ಹಿನ್ನೆಲೆಯಲ್ಲಿ ಶಾಸಕ ವಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಶಂಕುಸ್ಥಾಪನೆ ಮಾಡೋದು ಸಾಧನೆಯಲ್ಲ ಅದೊಂದು ವೈಫಲ್ಯ. ಕೆಲಸ ಮಾಡದ ರಾಜಕಾರಣಿಗಳ ಬಗ್ಗೆ ಜನ ನಂಬಿಕೆ ಇಡಲ್ಲ. ಓಟು ಹಾಕಲ್ಲ ಅಂತ ಕಿಡಿಕಾರಿದರು. ಇದಕ್ಕೂ ಮೊದಲು ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬೈಕ್ ಯಾತ್ರೆ, ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಯಿತು. ನಗರದ ಬಂಡೀಪುರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮೊಯ್ಲಿ ವಿರುದ್ಧ ಆರೋಪಗಳ ಸುರಿಮಳೆ ಜೊತೆ ದಿನಪೂರ್ತಿ ಧಿಕ್ಕಾರ ಕೂಗಿದ್ರು.