– ಎಚ್ಚರಿಕೆಯ ಹೆಜ್ಜೆ ಇಡಲು ಸುಮಕ್ಕ ಪ್ಲಾನ್
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದು, ಇತ್ತ ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್ ಆಡುತ್ತಿದೆ. ಹಾಗೆಯೇ ಸುಮಲತಾ ಕೂಡ ಎಚ್ಚರಿಕೆಯ ಹೆಜ್ಜೆ ಇಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೂಚನೆಯಂತೆ ಹೆಜ್ಜೆ ಇಡಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಎಸ್ಎಂಕೆ ಅವರನ್ನು ಮಾತ್ರ ಮಂಡ್ಯದಲ್ಲಿ ಪ್ರಚಾರಕ್ಕೆ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಎಸ್ಎಂಕೆ ಅವರನ್ನೇ ಬಿಜೆಪಿ ಎಂದು ಬಿಂಬಿಸಿ ಉಳಿದ ನಾಯಕರನ್ನು ದೂರ ಇಡಲು ಸುಮಲತಾ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಈ ಕಡೆ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರಿಗೆ ಇರಿಸುಮುರುಸು ಉಂಟಾಗದಂತೆ ಹೆಜ್ಜೆ ಇಡೋದು. ಈ ಮೂಲಕ ಬಿಜೆಪಿಯ ಬಾಹ್ಯ ಬೆಂಬಲದಿಂದ ಕೈ ಪಡೆಯೊಂದಿಗೆ ಅಖಾಡಕ್ಕೆ ಇಳಿಯುವ ಪ್ಲಾನ್ ಇದಾಗಿದೆ. ಈ ತಂತ್ರಗಾರಿಕೆಯಿಂದ ಮಾತ್ರ ಜೆಡಿಎಸ್ ವರ್ಸಸ್ ಸುಮಲತಾ ಅಖಾಡಕ್ಕೆ ಛಾನ್ಸ್ ಸಿಗಲಿದೆ. ಒಂದು ವೇಳೆ ಬಿಜೆಪಿ ನಾಯಕರನ್ನೇ ನೆಚ್ಚಿಕೊಂಡ್ರೆ ಸುಮಲತಾಗೆ ಕಷ್ಟ ಎದುರಾಗಲಿದೆ. ಹೀಗಾಗಿ ಈ ಎಲ್ಲಾ ಮುಂದಾಲೋಚನೆಗಳನ್ನು ಇಟ್ಟುಕೊಂಡು ಸುಮಲತಾ ಮಹತ್ವದ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.