ಬೆಂಗಳೂರು: ದೋಸ್ತಿ ಸರ್ಕಾರದ ಅಭ್ಯರ್ಥಿಗಳನ್ನು ಸೋಲಿಸಲು ಕರ್ನಾಟಕ ಬಿಜೆಪಿ ಪ್ಲಾನ್ ಮಾಡಿದ್ದು ಪ್ರಧಾನಿ ಮೋದಿ ರಾಜ್ಯದ 7 ಕಡೆ ಪ್ರಚಾರ ಭಾಷಣ ಮಾಡುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಪ್ರಧಾನಿಯಿಂದ 7 ರ್ಯಾಲಿ ನಡೆಸಲು ಬಿಜೆಪಿ ಮುಂದಾಗಿದೆ. ದಕ್ಷಿಣದಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರಿನಲ್ಲಿ ಕಾರ್ಯಕ್ರಮ ಮಾಡಿದರೆ ಉತ್ತರದಲ್ಲಿ ಬೆಳಗಾವಿ, ದಾವಣಗೆರೆ, ರಾಯಚೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.
ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯಕ್ರಮದ ದಿನಾಂಕ, ಸ್ಥಳ ಅಂತಿಮವಾಗಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ಗೆ ನೀಡಿದ ಬಳಿಕ ತುಮಕೂರಿನಿಂದ ಸ್ಪರ್ಧಿಸುತ್ತಿರುವ ದೇವೇಗೌಡರನ್ನು ಸೋಲಿಸಲು ತುಮಕೂರಿಗೂ ಮೋದಿಯನ್ನು ಕರೆತರಲು ಸಿದ್ಧತೆ ನಡೆದಿದೆ.
36 ಮಂದಿಯ ಪಟ್ಟಿ ರೆಡಿ : ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಬಿಜೆಪಿ 36 ಜನರ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಯೋಗಿ ಆದಿತ್ಯನಾಥ್, ಮುರಳೀಧರ್ ರಾವ್, ಪುರಂದರೇಶ್ವರಿ, ಕಿರಣ್ ಮಹೇಶ್ವರಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯ ನಾಯಕರು ಸ್ಥಾನ ಪಡೆದಿದ್ದಾರೆ.