ಬೆಂಗಳೂರು: ಹಳೆ ಮೈಸೂರು ಪ್ರಾಂತ್ಯದಲ್ಲಿರುವ ಜೆಡಿಎಸ್ ಕೋಟೆಯನ್ನು ಕೆಡವಲು ಬಿಜೆಪಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರನ್ನು ಪ್ರಚಾರಕ್ಕೆ ಬಳಸಲು ಬಿಜೆಪಿ ಪ್ಲಾನ್ ಮಾಡಿದೆ.
ಈ ಸಂಬಂಧವಾಗಿ ಇಂದು ಬಿಜೆಪಿ ಮುಖಂಡ ಆರ್ ಅಶೋಕ್ ಅವರು ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಎಸ್ಎಂ ಕೃಷ್ಣ ಅವರ ಜೊತೆ ಮಾತನಾಡಿದ್ದಾರೆ.
ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಹಾಸನದಲ್ಲಿ ಒಕ್ಕಲಿಗರ ಪ್ರಭಾವ ಜಾಸ್ತಿ ಇದೆ. ಈ ಕಾರಣಕ್ಕಾಗಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಎಸ್ಎಂ ಕೃಷ್ಣ ಅವರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
ಅಶೋಕ್ ಭೇಟಿ ಬಳಿಕ ಮಾತನಾಡಿದ ಎಸ್ಎಂಎಕೆ, ಇಲ್ಲಿ ವ್ಯಕ್ತಿಗಳು ಮುಖ್ಯ ಆಗಲ್ಲ, ಸಿದ್ಧಾಂತ ಮುಖ್ಯ ಆಗುತ್ತದೆ. ನಾವು ಸಿದ್ಧಾಂತದ ಜತೆ ಚುನಾವಣೆಗೆ ಹೋಗುತ್ತೇವೆ. ಜನ ತುಲನೆ ಮಾಡುತ್ತಾರೆ. ಬೆಂಗಳೂರಿಗೆ ಯಾರು ಏನು ಮಾಡಿದ್ದಾರೆ ಎಂದು ಜನ ನೋಡುತ್ತಾರೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿಗೆ ಮಾಡಿರುವ ಅಭಿವೃದ್ಧಿಯನ್ನು ಜನ ಮರೆಯುವುದಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ಹೇಳಿದರು.
ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹಾಗಾಗಿ ನಾನು ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲು ಬಯಸಿದ್ದೇನೆ. ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲವಾದ ನೆಲೆ ಇದೆ ಎಂದು ತಿಳಿಸಿದರು.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಅನುಭವಿ, ಅನಾನುಭವಿ ಎನ್ನುವುದು ಇಲ್ಲ. 25 ವರ್ಷ ತುಂಬಿದವರು ಯಾರೂ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಕುಟುಂಬ ರಾಜಕಾರಣದ ಬಗ್ಗೆ ರಾಜ್ಯಾಂಗದಲ್ಲಿ ಏನಾದ್ರೂ ನಿರ್ಬಂಧ ಇದೆಯೋ? ಸ್ಪರ್ಧೆ ಮಾಡಿದಾಗ ನಮ್ಮ ಅಭ್ಯರ್ಥಿಯೋ? ಅವರ ಅಭ್ಯರ್ಥಿಯೋ ಎನ್ನುವುದನ್ನು ಜನರು ತುಲನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv\