ರಾಮನಗರ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸಿ.ಪಿ.ಯೋಗೇಶ್ವರ್ ತೊಡೆ ತಟ್ಟಿ ನಿಂತಿದ್ದಾರೆ. ಚನ್ನಪಟ್ಟಣದಲ್ಲಿ ಡಿಕೆಶಿ ಶಕ್ತಿ ಪ್ರದರ್ಶನ ನಡೆಸಿದ ಬೆನ್ನಲ್ಲೇ ಯೋಗೇಶ್ವರ್ ಕೂಡ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಡಿಕೆ ಬ್ರದರ್ಸ್ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಪರಿವರ್ತನಾ ಯಾತ್ರೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಾ ಇವೆ.
ಇಂದು ಮಧ್ಯಾಹ್ನ ಚನ್ನಪಟ್ಟಣದ ಹೊರವಲಯದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶ ನಡೆಯಲಿದ್ದು, ಬಿಎಸ್ವೈ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಗೆ ಬಿಎಸ್ವೈ ತಿರುಗೇಟು ನೀಡಲು ಸಜ್ಜಾಗಿದ್ರೆ, ಡಿಕೆಶಿಗೆ ಯೋಗೇಶ್ವರ್ ಮುಯ್ಯಿಗೆ ಮುಯ್ಯಿ ತೀರಿಸಲು ರೆಡಿಯಾಗಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕ ಸಿ.ಪಿ ಯೋಗೇಶ್ವರ್ ಗೆ ಕಳೆದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಬ್ರದರ್ಸ್ ಟಾಂಗ್ ನೀಡಿದ್ರು. ಇದೀಗ ಸಾಧನಾ ಸಮಾವೇಶಕ್ಕೆ ಪರ್ಯಾಯವಾಗಿಯೇ ಪರಿವರ್ತನಾ ಯಾತ್ರೆಯನ್ನ ಚನ್ನಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಚನ್ನಪಟ್ಟಣ ಹೊರವಲಯದ ಮಳೂರು ಪಟ್ಟಣದ ಬಳಿಯ ಗದ್ದೆಬಯಲಿನಲ್ಲಿ ವೇದಿಕೆ ನಿರ್ಮಾಣವಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಮಲದ ಬಾವುಟಗಳು ರಾರಾಜಿಸುತ್ತಿವೆ.
ಸಾಧನಾ ಸಮಾವೇಶದಲ್ಲಿ ಡಿಕೆ ಬ್ರದರ್ಸ್ ಆಡಿದ ಮಾತುಗಳಿಗೆ ಏಟಿಗೆ ಎದಿರೇಟು ಎನ್ನುವಂತೆ ಟಾಂಗ್ ಕೊಡಲು ಯೋಗೇಶ್ವರ್ ವೇದಿಕೆ ಸಿದ್ಧಮಾಡಿಕೊಂಡಿದ್ದು, ಇವತ್ತಿನ ಸಮಾವೇಶ ಕುತೂಹಲ ಕೆರಳಿಸಿದೆ.