ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷ. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲು ಅವರ ಬಳಿ ಅಭ್ಯರ್ಥಿಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಘೋಷಣೆ ಮಾಡ್ತೀವಿ. ಕಾಂಗ್ರೆಸ್ 224 ಕ್ಷೇತ್ರಗಳಿಗೆ ಮಾತ್ರವಲ್ಲ 480 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕಲು ಸಿದ್ಧ. ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷ. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಲು ಅವರ ಬಳಿ ಅಭ್ಯರ್ಥಿಗಳಿಲ್ಲ. ಬಿಜೆಪಿ ಅವರ ಪರಿವರ್ತನಾ ಯಾತ್ರೆ ಅಟ್ಟರ್ ಪ್ಲಾಫ್ ಎಂದರು. ಸಂಸದ ಅನಂತ್ ಕುಮಾರ್ ಹೆಗ್ಡೆ ಬಗ್ಗೆ ಮಾತನಾಡಿ, ಅವರು ಸಂಸ್ಕೃತಿ ಇಲ್ಲದ ಮನುಷ್ಯ ಎಂದರು.
ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಪ್ರತಿಪಕ್ಷಗಳು ಆರೋಪದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದ ಯಾರಾದರೂ ಸಾವನ್ನಪ್ಪಿದ್ದಾರೆ ಅಂತ ದೂರು ನೀಡಲಿ ಆಮೇಲೆ ನೋಡೋಣ ಅಂದ್ರು.
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಬಗ್ಗೆ ವೈದ್ಯರಿಗೆ ತಪ್ಪು ಗ್ರಹಿಕೆ ಇತ್ತು. ಅವರು ಅಂದುಕೊಂಡ ಹಾಗೆ ಕಾಯ್ದೆಯಲ್ಲಿ ಇರಲಿಲ್ಲ. ಯೂನಿವರ್ಸಲ್ ಹೆಲ್ತ್ ಸ್ಕೀಂ ಜಾರಿಗೆ ತರುತ್ತಿದ್ದೇವೆ. ಅದರ ಪ್ರಕಾರ ದರ ನಿಗದಿ ಮಾಡಲಾಗುವುದು. ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡಲಿದ್ದೇನೆ. ಏಪ್ರಿಲ್, ಮೇನಲ್ಲಿ ಚುನಾವಣೆ ನಡೆಯುತ್ತೆ ಅಂದ್ರು.