ಬೆಂಗಳೂರು: ಹೊಸ ವರ್ಷದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿಯಿಂದ ಹೊಸ ಶಾಕ್ ಕಾದಿದ್ದು, ಕಳೆದ 3 ದಿನಗಳಿಂದ ದೆಹಲಿಯಲ್ಲಿ ಮಹಾ ಆಪರೇಷನ್ ನಡೆದಿದೆ ಎಂದು ಹೇಳಲಾಗುತ್ತಿದೆ.
2019, ಜನವರಿ 2ರ ಬಳಿಕ ರಾಜ್ಯ ರಾಜಕೀಯದಲ್ಲಿ ನೂತನ ಪರ್ವ ಶುರುವಾಗಲಿದ್ದು, ಶಾಸಕ ರಮೇಶ್ ಜಾರಕಿಹೊಳಿ, ನಾಗೇಂದ್ರ ತಂಡ ಮತ್ತು ಶಂಕರ್ ಜೊತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಗೆ ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಮತ್ತು ಶ್ರೀರಾಮುಲು ಅವರೇ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತಮ್ಮ ಎಲ್ಲಿ ಹೋದ್ರು ಪ್ರಶ್ನೆಗೆ ಅಣ್ಣ ಸತೀಶ್ ಜಾರಕಿಹೊಳಿ ಉತ್ತರ
ಇಂದು ಪ್ರಮುಖ ನಾಯಕರ ನಡುವೆ ಎರಡನೇ ಸುತ್ತಿನ ಮಾತುಕತೆ ಸಾಧ್ಯತೆ ಇದೆ. ಇದನ್ನು ಹೈಕಮಾಂಡ್ ಹೆಗಲಿಗೆ ಹಾಕಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಷ್ಟೇ ಅಲ್ಲದೇ ಆಪರೇಷನ್ ಕಮಲಕ್ಕೆ ಓಕೆ ಮಾಡಿ, ದಾರಿ ಬಗ್ಗೆ ಸ್ಕೆಚ್ ಕೊಟ್ಟು ಬಂದಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿ ಅವರು ವಿದೇಶದಿಂದ ಬರುವ ಮೊದಲು ಶಾಕ್ ಕಾದಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈಗಾಗಲೇ ಕುದುರೆ ವ್ಯಾಪಾರಕ್ಕೆ ಕಮಲ ನಾಯಕರು ಸಿದ್ಧತೆ ನಡೆಸಿದ್ದಾರೆ. ಇತ್ತ ಮೊದಲಿಗೆ ಮೂರು ಹಂತದಲ್ಲಿ ಆಪರೇಷನ್ ಕಮಲ ನಡೆಯಲಿದೆ. 18-20 ಶಾಸಕರು ಬಿಜೆಪಿಯ ನಿರಂತರ ಸಂಪರ್ಕದಲ್ಲಿದ್ದಾರಂತೆ. ರಮೇಶ್ ಜಾರಕಿಹೊಳಿ ಸೇರಿ 5-6 ಶಾಸಕರಿಂದ ಅಮಿತ್ ಶಾ ಭೇಟಿಯಾಗಿದ್ದಾರೆ ಎಂಬ ಸುದ್ದಿ ಇದೆ. ಮೊದಲ ಹಂತದಲ್ಲಿ ಅರ್ಧ ಡಜನ್ ಶಾಸಕರ ರಾಜೀನಾಮೆಗೆ ಪ್ಲಾನ್ ಮಾಡಿದ್ದು, ಎರಡು, ಮೂರನೇ ಹಂತದಲ್ಲೂ 5-6 ಶಾಸಕರಿಂದ ರಾಜೀನಾಮೆ ಕೊಡಿಸುವ ಲೆಕ್ಕಾಚಾರ ಮಾಡಲಾಗಿದೆಯಂತೆ. ದೋಸ್ತಿ ಸರ್ಕಾರದ ಬಹುಮತ ಅಲ್ಪಮತಕ್ಕೆ ಕುಸಿದಾಗ ಬಿಜೆಪಿ ಅಸಲಿ ಆಟ ಆರಂಭಿಸಲು ಸಿದ್ಧಗೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv