ಬೆಂಗಳೂರು: ಕಾಂಗ್ರೆಸ್ ಶಾಸಕರ ನಡುವೆ ಕಚ್ಚಾಟ, ಮೈತ್ರಿ ಸರ್ಕಾರದ ವಿರುದ್ಧ ಕೈ ನಾಯಕರಲ್ಲಿ ಕೆಲವರು ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಚರ್ಚೆಯಲ್ಲಿದ್ದ ಆಪರೇಷನ್ ಕಮಲ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಹೌದು. ರಾಜ್ಯದಲ್ಲಿ ಆಪರೇಷನ್ ಕಮಲ ಬೇಕಾ? ಬೇಡ್ವೋ? ಈ ವಿಚಾರದ ಬಗ್ಗೆ ಬಿಜೆಪಿಯ ಹೈಕಮಾಂಡ್ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲ. ಆದರೆ ದೆಹಲಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ವಿಚಾರ ಅಂತಿಮವಾಗಲಿದೆ.
ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖರ ಜತೆ ಇವತ್ತು ಸಂಜೆ ಅಥವಾ ನಾಳೆ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್ ಅನುಮತಿ ನೀಡಿದರೆ ಮಾತ್ರ ರಾಜ್ಯ ನಾಯಕರು ಆಪರೇಷನ್ ಕಮಲ ಮಾಡಲು ಮುಂದಾಗಲಿದ್ದಾರೆ.
ಜಾರಕಿಹೊಳಿ ಸಹೋದರರ ಜತೆ ಶ್ರೀರಾಮುಲು, ಉಮೇಶ್ ಕತ್ತಿ, ಸಿ.ಎಂ.ಉದಾಸಿ ಸಂಪರ್ಕದಲ್ಲಿದ್ದಾರೆ. ಜಾರಕಿಹೊಳಿ ಸಹೋದರರಿಗೆ ಹಲವು ಉತ್ತರ ಕರ್ನಾಟಕ ಭಾಗದ ಶಾಸಕರ ಬೆಂಬಲ ಇದೆ. ಹೀಗಾಗಿ ಒಂದು ವೇಳೆ ಹೈಕಮಾಂಡ್ ಅನುಮತಿ ಕೊಟ್ಟರೆ ಮಾತ್ರ ಸೆಪ್ಟೆಂಬರ್ ಅಂತ್ಯದಲ್ಲಿ ಆಪರೇಷನ್ ನಡೆಯುವ ಸಾಧ್ಯತೆಯಿದೆ. ಇಲ್ಲದೇ ಇದ್ದರೆ ಬಿಜೆಪಿ ನಾಯಕರು ಸೈಲೆಂಟ್ ಆಗಲಿದ್ದಾರೆ. ಒಟ್ಟಿನಲ್ಲಿ ರಾಜ್ಯಲ್ಲಿ ಆಪರೇಷನ್ ಕಮಲ ಮಾಡಬೇಕೇ? ಬೇಡವೇ ಎನ್ನುವ ನಿರ್ಧಾರ ಇಂದು ಅಥವಾ ನಾಳೆ ಅಂತಿಮವಾಗಲಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಅಜ್ಮೇರ್ ಪ್ರವಾಸಕ್ಕೆ ಸಿಕ್ತು ಪೊಲಿಟಿಕಲ್ ಟ್ವಿಸ್ಟ್! ಜಾರಕಿಹೊಳಿ ತಂಡದಲ್ಲಿ ಯಾರೆಲ್ಲ ಇದ್ದಾರೆ?
ಈ ಕಾರ್ಯಕಾರಣಿಯಲ್ಲಿ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಸಾಧನೆ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ವಿಚಾರದ ಬಗ್ಗೆ ಯಡಿಯೂರಪ್ಪ ಹಿರಿಯ ನಾಯಕರ ಜೊತೆ ಚರ್ಚಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv