ಕಾರವಾರ: ಸಿದ್ಧರಾಮಯ್ಯ ಹಾಗೂ ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಜನರಲ್ಲಿ ಭ್ರಮನಿರಸನ ಉಂಟು ಮಾಡಿದೆ. ಹೀಗಾಗಿ ಯೋಗ್ಯರಾಗಿರುವ ಪರಮೇಶ್ವರ್ ಅವರು ಅಧಿಕಾರಕ್ಕೆ ಬರಲಿ ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಆಗ್ರಹಿಸಿದ್ದಾರೆ.
ಪೆಟ್ರೋಲ್ ದರ ಏರಿಕೆ ವಿರುದ್ಧ ಶಿರಸಿ ನಗರದ ಅಂಚೆ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ಧರಾಮಯ್ಯ ಹಾಗೂ ಡಿಕೆಶಿ (DK Shivakumar) ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಓಲೈಕೆಗೆ, ಮತಗಳಿಕೆಗೆ ನಿಮ್ಮದೇ ರಾಜಕಾರಣ ಮಾಡುತ್ತಿದ್ದೀರಿ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಸಿಎಂ ಸಿದ್ಧರಾಮಯ್ಯನವರು (Siddaramaiah) ರಾಜೀನಾಮೆ ನೀಡಲಿ, ಯೋಗ್ಯರಾಗಿರುವ ಪರಮೇಶ್ವರ್ ಅವರು ಅಧಿಕಾರಕ್ಕೆ ಬರಲಿ, ಅವರು ಹೇಗೆ ಆಡಳಿತ ಮಾಡ್ತಾರೆ ಅಂತಾ ನೋಡೋಣ ಎಂದರು.
ಜನರು ಕಾಂಗ್ರೆಸ್ಗೆ 5 ವರ್ಷಗಳ ಅಧಿಕಾರ ನೀಡಿದರಾದರೂ ಕಾಂಗ್ರೆಸ್ ಸರ್ಕಾರವೇ ರಾಜೀನಾಮೆ ನೀಡುವ ಪರಿಸ್ಥಿತಿಯಿದೆ. ತಕ್ಷಣ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕೆಂದು ಹೆಗಡೆ ಆಗ್ರಹಿಸಿದರು.