ನವದೆಹಲಿ: ಸಂಸದ ಉದಿತ್ ರಾಜ್ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಅಧಿಕೃತವಾಗಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಉದಿತ್ ರಾಜ್ ಕಾಂಗ್ರೆಸ್ ಸೇರಿದ್ದಾರೆ. ಉದಿತ್ ರಾಜ್ ಅವರು ದೆಹಲಿಯ ವಾಯುವ್ಯ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಸದರಾಗಿದ್ದು ಈ ಬಾರಿ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಮನೆ ಸೇರಿದ್ದಾರೆ.
ದೆಹಲಿಯ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಂಜಾಬ್ನ ಜನಪದ ಹಾಗೂ ಸೂಫಿ ಗಾಯಕ ಹನ್ಸ್ ರಾಜ್ ಹಸ್ಸ್ ಕಣಕ್ಕೆ ಇಳಿದಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು.
BJP MP Udit Raj joins Congress party in presence of Congress President Rahul Gandhi pic.twitter.com/nkk09fPlD1
— ANI (@ANI) April 24, 2019
ಟಿಕೆಟ್ ತಪ್ಪಿದ್ದರಿಂದ ಅಸಮಾಧಾನ ಹೊರ ಹಾಕಿದ್ದ ಉದಿತ್ ರಾಜ್ ಅವರು, ದೆಹಲಿಯ ಸಂಸದರ ಪೈಕಿ ನಾನು ಉತ್ತಮ ಕೆಲಸ ಮಾಡಿದ್ದೇನೆ. ನಾನು ದೇಶಾದ್ಯಂತ ಬಿಜೆಪಿಯಲ್ಲಿರುವ ಏಕೈಕ ದಲಿತ ನಾಯಕ. ಯಾಕೆ ಹೀಗೆ ನನ್ನನ್ನು ಕಡೆಗಣಿಸುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದು ದೂರಿದ್ದರು.
ಉದಿತ್ ರಾಜ್ ಅವರು ತಮ್ಮ ಇಂಡಿಯನ್ ಜಸ್ಟಿಸ್ ಪಾರ್ಟಿಯನ್ನು (ಐಜೆಪಿ) ವಿಲೀನಗೊಳಿಸಿದ್ದರು. ಈ ಮೂಲಕ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.