ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ಜೊತೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭೋಜನ ಮಾಡಿರುವುದಕ್ಕೆ ಶಾಸಕ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ ಗೂಳಿಹಟ್ಟಿ ಶೇಖರ್, ಸುಧಾಕರ್ ಅವರನ್ನು ಡ್ರಾಪ್ ಮಾಡಲು ಖಾಸಗಿ ಹೋಟೆಲ್ ಗೆ ಹೋಗಿದ್ದಾರೆ. ನಾನು ಅವರ ಜೊತೆ ಮಾತಾಡಿದ್ದೇನೆ. ಹೋಟೆಲ್ ನಲ್ಲಿ ಶಾಸಕರಿಗೆ ಪಾರ್ಟಿ ನಡೆಯುತ್ತಿದ್ದ ವೇಳೆಯೇ ಅವರು ಹೋಗಿದ್ದು ಬೇರೆ ರೀತಿಯ ಅರ್ಥಕ್ಕೆ ಕಾರಣವಾಗಿದೆ ಅಂತ ಹೇಳಿದ್ರು.
ಶೇಖರ್ ಅವರು ಯಾವುದೇ ರೀತಿಯಲ್ಲಿ ಬಿಜೆಪಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಮ್ಮನೆ ಕಾಂಗ್ರೆಸ್ ನವರು ಈ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ನಾಯಿ ನರಿಗಳ ರೀತಿ ಕಚ್ಚಾಡುತ್ತಿದ್ದಾರೆ ಅಂತ ಅವರು ಹೇಳಿದ್ದಾರೆ.
ಏನಿದು ಘಟನೆ?:
ಸಚಿವ ಡಿಕೆ ಶಿವಕುಮಾರ್ ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಕಾರಿನಲ್ಲಿ ಸುಧಾಕರ್ ಜೊತೆ ಗೂಳಿಹಟ್ಟಿ ಶೇಖರ್ ಇರುವುದನ್ನು ನೋಡಿದ ಜೆಡಿಎಸ್, ಕಾಂಗ್ರೆಸ್ ಶಾಸಕರು ಬನ್ನಿ ಬನ್ನಿ ಊಟ ಮಾಡೋದಕ್ಕೆ ಯಾವ ಪಕ್ಷ ಆದರೇನು? ಊಟ ಮಾಡಿ ಅಂತಾ ಹೇಳಿ ಗೂಳಿಹಟ್ಟಿಯನ್ನು ಪೇಚಿಗೆ ಸಿಲುಕಿಸಿದ್ರು. ನಂತರ ಊಟ ಮಾಡಿದ ಗೂಳಿಹಟ್ಟಿ ಸುಧಾಕರ್ ಅವರ ಕಾರಿನಲ್ಲೆ ವಾಪಾಸಾಗಿದ್ದಾರೆ ಎಂದು ವರದಿಯಾಗಿತ್ತು.