ಮಂಡ್ಯ: ಜಿಲ್ಲೆಯನ್ನು ಹೊರತು ಪಡಿಸಿ ರಾಜ್ಯದ ಎಲ್ಲಾ ಭಾಗದಲ್ಲೂ ಬಾವುಟ ಹಾರಿಸುತ್ತಿರುವ ಬಿಜೆಪಿ ಈಗ ಮಂಡ್ಯದಲ್ಲೂ ಪಕ್ಷ ಸಂಘಟಿಸಲು ಒಕ್ಕಲಿಗರ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಬಿಜೆಪಿ ಇದೀಗ ಮಂಡ್ಯ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದು, ಒಕ್ಕಲಿಗರ ಕೋಟೆ ಭೇದಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದರಂತೆಯೇ ಮಂಡ್ಯ ಉಸ್ತುವಾರಿಯನ್ನು ಸಚಿವ ಆರ್.ಅಶೋಕ್ಗೆ ವಹಿಸಲು ಬಿಜೆಪಿ ಸಿದ್ಧವಾಗಿದೆ. ಇದನ್ನೂ ಓದಿ: 17 ಶಾಸಕರಿಂದ ಪ್ರಮಾಣವಚನ – ಯಾರಿಗೆ ಯಾವ ಖಾತೆ ಸಿಗಬಹುದು?
ಅಶೋಕ್ ಕೂಡ ಮಂಡ್ಯ ಉಸ್ತುವಾರಿಯಾದರೆ ಒಕ್ಕಲಿಗರ ನಾಯಕನಾಗಿ ಬೆಳೆಯುವ ಸಾಧ್ಯತೆ ಇದೆ. ಇದರಿಂದ ಮುಂಬರುವ ಕೆ.ಆರ್ ಪೇಟೆ ಉಪಚುನಾವಣೆಯಲ್ಲೂ ಬಿಜೆಪಿಗೆ ಉಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಆರ್.ಅಶೋಕ್ಗೆ ಮಂಡ್ಯ ಉಸ್ತುವಾರಿ ಪಟ್ಟಕಟ್ಟಲು ಬಿಜೆಪಿ ನಿರ್ಧಾರ ಮಾಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ 17 ಮಂದಿ ಶಾಸಕರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಇನ್ನೂ ಯಾರಿಗೂ ಖಾತೆ ಹಂಚಿಕೆ ಮಾಡಿಲ್ಲ. ಇದಾದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದರು.