ಬೆಂಗಳೂರು: ಪತನದ ಅಂಚಿನಲ್ಲಿರುವ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿ ನಾಯಕರು ಕೊನೆ ಕ್ಷಣದ ಕಸರತ್ತು ಮಾಡುತ್ತಿದ್ದಾರೆ. ಇತ್ತ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿದ್ದಾರೆ.
ಇಂದಿನ ವಿಧಾನಸಭೆ ಸದನಕ್ಕೆ ಬಿಜೆಪಿ ಪಡೆ ಪಕ್ಕಾ ಪ್ಲಾನ್ ಸಮೇತ ಬರುತ್ತಿದ್ದು, ವಿಶ್ವಾಸ ಮತ ಯಾಚನೆ ನೆಪದಲ್ಲಿ ಸಿಎಂ ಅಸ್ತ್ರಗಳಿಗೆ ಪ್ರತಿ ಅಸ್ತ್ರ ರೆಡಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಸದನ ಆರಂಭದಲ್ಲೇ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸಿಎಂ ಮತ್ತು ಸದಸ್ಯರ ಚರ್ಚೆಗೆ ಕಡಿಮೆ ಅವಕಾಶ ಕೊಡುವಂತೆ ಬಿಜೆಪಿ ಸ್ಪೀಕರ್ ಬಳಿ ಮನವಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಅಷ್ಟೇ ಅಲ್ಲದೇ ಇವತ್ತೇ ಚರ್ಚೆ ಮುಗಿಸಿ ವಿಶ್ವಾಸ ಮತದ ಪ್ರಕ್ರಿಯೆ ಮುಗಿಸುವಂತೆಯೂ ಸ್ಪೀಕರ್ಗೆ ಬಿಜೆಪಿ ಒತ್ತಾಯಿಸಲಿದೆ. ಜೊತೆಗೆ ವಿಶ್ವಾಸ ಮತ ಕೋರುವ ಮುನ್ನ ಸಿಎಂ ಭಾಷಣ ಎದುರಿಸಲು ಬಿಜೆಪಿ ಶಾಸಕರು ಸಜ್ಜಾಗಿ ಬರುತ್ತಿದ್ದಾರೆ. ನಮ್ಮ ಶಾಸಕರನ್ನು ಪ್ರಚೋದನೆ ಮಾಡಲೆಂದೇ ಸಿಎಂ ಟಾರ್ಗೆಟ್ ಮಾಡಿ ಭಾಷಣ ಮಾಡಬಹುದು ಬಿಜೆಪಿ ನಾಯಕರು ಈಗಾಗಲೇ ಲೆಕ್ಕಾಚಾರ ಹಾಕಿದ್ದಾರೆ. ಹೀಗಾಗಿ ಅದಕ್ಕೆಂದೇ ತಮ್ಮ ಶಾಸಕರಿಗೆ ಯಡಿಯೂರಪ್ಪ ರೆಸಾರ್ಟಿನಲ್ಲೇ ವಿಶೇಷ ತರಬೇತಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಸಿಎಂ ವಿದಾಯ ಭಾಷಣ ವೇಳೆ ಶಾಸಕರು ಹೇಗಿರಬೇಕೆಂದು ಯಡಿಯೂರಪ್ಪ ಪಾಠ ಮಾಡಿದ್ದಾರೆ. ಸಿಎಂ ಎಷ್ಟೇ ಕಟು ಪದಗಳಿಂದ ಟೀಕಿಸಿದರೂ, ವಾಗ್ದಾಳಿ ಮಾಡಿದರೂ ಮೌನವಾಗಿ ಇರಬೇಕೆಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಸಿಎಂ ಭಾಷಣ ಕೇಳಿ ಶಾಸಕರು ಗದ್ದಲ ಮಾಡಿದರೆ ಸ್ಪೀಕರ್ ಅಮಾನತು ಮಾಡುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಭಾಷಣ ಎಷ್ಟೇ ಸಿಟ್ಟು ತರಿಸಿದರೂ ಬಿಜೆಪಿ ಶಾಸಕರು ಸದನದಲ್ಲಿ ಮೌನಕ್ಕೆ ಶರಣಾಗಲಿದ್ದಾರೆ ಎನ್ನಲಾಗುತ್ತಿದೆ.
ಒಂದೊಮ್ಮೆ ಸಿಎಂ ವಿಶ್ವಾಸ ಮತಯಾಚನೆಗೆ ಪ್ರಸ್ತಾವನೆ ಸಲ್ಲಿಸದಿದ್ದರೂ ಅದಕ್ಕೂ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ವಿಶ್ವಾಸ ಮತ ಯಾಚನೆಗೆ ಮುಂದಾಗದಿದ್ದರೆ ಸಿಎಂ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನು ಬಿಜೆಪಿ ಮಂಡಿಸುವ ಸಾಧ್ಯತೆಯಿದೆ.