– 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
– ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್
– ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಣೆ
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ತನ್ನ ಬಹುನಿರೀಕ್ಷಿತ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ (Narendra Modi) ಅವರು ಬಡವರು, ಮಹಿಳೆಯರು, ರೈತರು, ಮಹಿಳೆಯರ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯಲಿಂಗಿಗಳನ್ನು ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ ಯೋಜನೆ ಫಲಾನುಭವಿಗಳಾಗಲಿದ್ದಾರೆಂಬ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಕಾಲಕ್ಕೆ ತಕ್ಕಂತೆ ಎಂಎಸ್ಪಿ ಜಾರಿ
ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ ಮತ್ತು ಡಿಜಿಟಲ್ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ – ಮೋಸ ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಬಿಜೆಪಿ ಜನರಿಗೆ ನೀಡಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?
ಶೂನ್ಯ ವಿದ್ಯುತ್ ಬಿಲ್
ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ (UCC) ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಪ್ರಧಾನಿಗಳ ಸಮಾಗಮದಿಂದ ದೊಡ್ಡ ಸಂದೇಶ ರವಾನೆ: ಯದುವೀರ್