ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರೋ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಅವಕಾಶ ಇಲ್ಲ ಅಂತ ಬಿಜೆಪಿ ಹೇಳ್ತಿದ್ದರೆ, ಏಸು ಪ್ರತಿಮೆ ಸ್ಥಾಪನೆ ಮಾಡಿಯೇ ಸಿದ್ಧ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ. ಈ ಗೊಂದಲಗಳ ಮಧ್ಯೆ ಸೋಮವಾರ(ನಾಳೆ) ಬಿಜೆಪಿ, ಸ್ವಾಮೀಜಿಗಳ ನಿಯೋಗ ಕಪಾಲ ಬೆಟ್ಟಕ್ಕೆ ಭೇಟಿ ಕೊಡ್ತಿದ್ದು, ಬಿಜೆಪಿ ಭೇಟಿಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.
ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿರೋ ಡಿಕೆ ಶಿವಕುಮಾರ್ ಕನಕಪುರ ಜನರು ಶಾಂತಿ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ. ಬಿಜೆಪಿ ಅವರು ಉದ್ದೇಶ ಪೂರ್ವಕವಾಗಿ ವಿವಾದ ಮಾಡಲು ಸೋಮವಾರ ಕನಕಪುರದ ಕಪಾಲ ಬೆಟ್ಟಕ್ಕೆ ಬರುತ್ತಿದ್ದಾರೆ. ಅಲ್ಲಿ ಸಭೆ ಮಾಡಿ ಗೊಂದಲ ಸೃಷ್ಟಿ ಮಾಡೋದು ಅವರ ಉದ್ದೇಶ. ಹೀಗಾಗಿ ಯಾರು ಬಿಜೆಪಿ ಅವರ ಮಾತಿಗೆ ಶಾಂತಿ ಕಳೆದುಕೊಳ್ಳಬೇಡಿ. ಶಾಂತಿಯುತವಾದ ಕನಕಪುರದ ಗೌರವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ ಬಿಜೆಪಿ, ಆರ್ ಎಸ್ಎಸ್ ವಿರುದ್ಧವೂ ಗುಡುಗಿರೋ ಡಿಕೆಶಿ, ಹಿಂದುಳಿದ ಕನಕಪುರವನ್ನ ಅಭಿವೃದ್ಧಿ ಮಾಡಿದ್ದೇವೆ. ಇದನ್ನ ಸಹಿಸದ ಬಿಜೆಪಿ, ಆರ್ ಎಸ್ಎಸ್ ಶಾಂತಿ ಕದಡಲು ಕನಕಪುರಕ್ಕೆ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.