ಬೆಂಗಳೂರು: ಕೋವಿಡ್ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಸೋಂಕು ಜನ ಸಾಮಾನ್ಯರು ಕೊರೊನಾ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ನಿಯಮಗಳನ್ನು ಬಿಜೆಪಿ ಶಾಸಕರು, ಮುಖಂಡರೇ ಪಾಲಿಸುತ್ತಿಲ್ಲ. ಈ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ದರ್ಪ, ಧಿಮಾಕು, ದೌಲತ್ತು ಪ್ರದರ್ಶಿಸ್ತಲೇ ಇದ್ದಾರೆ. ಬಿಜೆಪಿಗರ ಇಂಥ ಉದ್ಧಟತನವನ್ನೇ ಕಾಂಗ್ರೆಸಿಗರು ಮತ್ತೊಮ್ಮೆ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ನಾನು ಮಾಸ್ಕ್ ಹಾಕಲ್ಲ : ಸಚಿವ ಉಮೇಶ್ ಕತ್ತಿ
ಮೇಕೆದಾಟು ಪಾದಯಾತ್ರೆ ವೇಳೆ ನಮ್ಮ ಮೇಲೆ ಮಾತ್ರ ಎಫ್ಐಆರ್ ಹಾಕಿದ್ದೀರಿ. ಆದರೆ ಈಗ ಇವರ ಮೇಲೆ ಯಾಕೆ ಕೇಸ್ ಹಾಕಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡವಾಗಿದ್ದಾರೆ. ಇದನ್ನು ಖಂಡಿಸಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಬುಧವಾರ ಧರಣಿ ನಡೆಸಲು ಪ್ಲಾನ್ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಮೈಸೂರಿನಲ್ಲಿ ಇರುವ ಕಾರಣ ನಾಡಿದ್ದು ಗುರುವಾರ ಇಬ್ಬರೂ ಒಟ್ಟಿಗೆ ಸಿಎಂ ಮನೆ ಎದುರು ಧರಣಿ ನಡೆಸಲಿದ್ದಾರೆ.ಈ ಬಗ್ಗೆ ಮಾತಾಡಿರುವ ಶಿವಕುಮಾರ್, ಸಿಎಂ ಭೇಟಿಗೆ ಹೋಗುವುದು ನೆಂಟಸ್ಥಿಕೆ ಮಾಡಲು ಅಲ್ಲ. ನಾವೇನು ಮಾಡುತ್ತೇವೆ ಎನ್ನುವುದನ್ನು ನೋಡುತ್ತೀರಿ ಎಂದು ಗುಡುಗಿದರು. ಇದನ್ನೂ ಓದಿ: ಮಂಗಳೂರು ಕಾಂಗ್ರೆಸ್ ಸಭೆಯಲ್ಲಿ ಹೈಡ್ರಾಮಾ – ಸದಸ್ಯರನ್ನೇ ಹೊರಹಾಕಿದ ನಾಯಕರು
ಕಾಂಗ್ರೆಸ್ ನಿಯೋಗ ಈ ಸಂಬಂಧ ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಗೆ ದೂರು ಕೊಟ್ಟಿದೆ. 23 ಪುಟಗಳ ದೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ 9 ಪ್ರಕರಣಗಳ ಬಗ್ಗೆ ದೂರು ಸಲ್ಲಿಸಿದೆ. ಇದಕ್ಕೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದು, ಎಲ್ಲೆಲ್ಲಿ ಕೇಸ್ ಹಾಕಿಲ್ಲ ಅಂತ ಪಿಟಿಷನ್ ಕೊಡ್ಲಿ ಅಂತ ಸವಾಲು ಎಸೆದಿದ್ದಾರೆ.