ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ (BJP) ಹಮ್ಮಿಕೊಂಡಿದ್ದ ಮೈಸೂರು ಚಲೋವನ್ನ ಹತ್ತಿಕ್ಕುವ ಕೆಲಸ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ನೇತೃತ್ವದಲ್ಲಿ ಮೈಸೂರು ಚಲೋಗೆ ಹೊರಟ ನಾಯಕರನ್ನ ವಶಕ್ಕೆ ಪಡೆಯುವ ಮೂಲಕ ಮೈಸೂರು ಚಲೋ ಪ್ರತಿಭಟನೆಗೆ ಪೊಲೀಸರು ಅಡ್ಡಿ ಪಡಿಸಿದರು.
ಮೈಸೂರು ರಸ್ತೆಯ ಕದಂಬ ಹೋಟೆಲ್ನಿಂದ ಮೈಸೂರಿಗೆ ತೆರಳಲು ವಿಜಯೇಂದ್ರ ನೇತೃತ್ವದ ಶಾಸಕರ ತಂಡ ಮುಂದಾಯ್ತು. ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದರು. ಮೈಸೂರು ರಸ್ತೆಯಲ್ಲಿಯೇ ಪೊಲೀಸರು ವಿಜಯೇಂದ್ರ, ಶಾಸಕ ಮುನಿರತ್ನ ಸೇರಿ ಎಲ್ಲರನ್ನು ವಶಕ್ಕೆ ಪಡೆದರು. ಈ ವೇಳೆ ಭಾರಿ ಹೈಡ್ರಾಮಾ ನಡೆಯಿತು. ಪೊಲೀಸರು ಮೈಸೂರಿಗೆ ಹೋಗದಂತೆ ಎಲ್ಲಾ ನಾಯಕರನ್ನು ತಡೆದರು. ಇದನ್ನೂ ಓದಿ: ಮುಡಾ ಅಕ್ರಮ: ಸಿಎಂ ರಾಜೀನಾಮೆ ಕೊಡುವವರೆಗೂ ಬಿಜೆಪಿಯಿಂದ ಹೋರಾಟ – ವಿಜಯೇಂದ್ರ
ನಾಯಕರು ಮತ್ತೆ ಮೈಸೂರು ರಸ್ತೆ ಟೋಲ್ ಬಳಿ ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆ ಗಾಡಿಗಳನ್ನ ನಿಲ್ಲಿಸಿ ಮೈಸೂರಿಗೆ ತೆರಳುವಂತೆ ಪೊಲೀಸರಿಗೆ ಆಗ್ರಹಿಸಿದರು. ಇದಕ್ಕೂ ಅವಕಾಶ ಕೊಡದ ಪೊಲೀಸರು ಮತ್ತೊಮ್ಮೆ ವಿಜಯೇಂದ್ರ ಅವರೊಂದಿಗಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡದಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೆಲ ಹೊತ್ತು ಇರಿಸಿದ್ದರು. ಬಳಿಕ ಎಲ್ಲರನ್ನು ಬಿಟ್ಟು ಕಳಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿದ್ದರಾಮಯ್ಯ ಮುಡಾ ಅಕ್ರಮದ ವಿರುದ್ಧ ಸದನದಲ್ಲಿ ಹೋರಾಟ ಮಾಡುವುದಾಗಿ ಎಚ್ವರಿಸಿದರು. ಸಿಎಂ ರಾಜೀನಾಮೆ ಕೊಡಬೇಕು. ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಸಿಬಿಐಗೆ ವಹಿಸೋವರೆಗೆ ಹೋರಾಟ ನಿಲ್ಲಿಸೋದಿಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ನನಗೇನೂ ಗೊತ್ತಿಲ್ಲ: ಇ.ಡಿ ವಶಕ್ಕೆ ಪಡೆದಾಗ ಶಾಸಕ ನಾಗೇಂದ್ರ ಪ್ರತಿಕ್ರಿಯೆ