ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಲವು ಟಿಕೆಟ್ ವಂಚಿತ ನಾಯಕರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಹಲವು ನಾಯಕರು ಇಂದು ಸಂಜೆಯೇ ಬಿಎಸ್ವೈ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಗರದ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ವೈ ರನ್ನು ಭೇಟಿ ಮಾಡಿದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್. ಆರ್ ರಮೇಶ್ ಬಳಿಕ ಸುದ್ದಿಗಾರರರ ಜೊತೆ ಮಾತನಾಡಿದರು.
ಟಿಕೆಟ್ ಕೈ ತಪ್ಪಿರುವ ಕುರಿತು ಕೋಪ ಮಾಡಿಕೊಳ್ಳಬೇಡ. ಸದ್ಯ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ. ಇನ್ನು ಒಂದು ದಿನ ಕಾದು ನೋಡು ಎಂದು ಹೇಳಿದ್ದಾರೆ. ರಾಜ್ಯಾಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ನನ್ನ ಮೇಲೆ ರಾಜ್ಯಾಧ್ಯಕ್ಷರಿಗೆ ಪ್ರೀತಿ ಇದೆ. ಹಾಗಾಗಿ ಅವರ ಮೇಲೆ ನನಗೆ ಗೌರವವಿದೆ ಎಂದು ತಿಳಿಸಿದರು.
ಇದೇ ವೇಳೆ ಕೊಡಗು ಜಿಲ್ಲಾ ಮುಖಂಡರ ಜೊತೆ ಬಿಎಸ್ವೈ ಮಾತುಕತೆ ನಡೆಸಿದರು. ಬಳಿಕ ಟಿಕೆಟ್ ವಂಚಿತ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಬಿಎಸ್ವೈ ಜೊತೆ ಮಹತ್ವದ ಚರ್ಚೆ ನಡೆಸಿದರು.