ಕೊಪ್ಪಳ: ನಿಜವಾದ ಪಾಕಿಸ್ತಾನಿಗಳು ಬಿಜೆಪಿಯವರು. ನಾವುಗಳ ನಿಜವಾದ ಭಾರತೀಯರು ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯನ್ನು ಹರಿಹಾಯ್ದಿರುವ ಅನ್ಸಾರಿ, ಭಾರತದಲ್ಲಿ ನಿಜವಾದ ದೇಶದ್ರೋಹಿಗಳು ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ. ಬಿಜೆಪಿಯವರ ದೇಶದ್ರೋಹಿಗಳು. ಅವರು ಪಾಕಿಸ್ತಾನಿಗಳು. ನಾವು ನಿಜವಾದ ಭಾರತೀಯರು. ಭಾರತಕ್ಕಾಗಿ ನಾವು ತಲೆ ತಗ್ಗಿಸುವುದಕ್ಕೂ ಸಿದ್ಧ. ರುಂಡ ಕತ್ತರಿಸಲು ಸಿದ್ಧರಿದ್ದೇವೆ. ಆದರೆ ಕೆಲವು ಬಿಜೆಪಿ ನಾಯಕರು, ನನ್ನನ್ನು ಗೆಲ್ಲಿಸಿದರೆ ಗಂಗಾವತಿಯನ್ನು ಪಾಕಿಸ್ತಾನ ಮಾಡುತ್ತಾನೆಂದು ಟೀಕಿಸುತ್ತಾರೆ. ನನಗೇನು ಬೇರೆ ಕೆಲಸವಿಲ್ಲವೇನು? ಅವರಿಗೆ ಮಾನ ಮರ್ಯಾದೆ ಇದ್ದರೆ ಅವರೇ ಪಾಕಿಸ್ತಾನಕ್ಕೆ ಹೋಗಲಿ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಯಬಿಟ್ಟಿದ್ದಾರೆ. ಇದನ್ನೂ ಓದಿ: ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಗೂಂಡಾಗಿರಿ – ಆ ನನ್ಮಗನಿಗೆ ಒದಿರಲೇ ಎಂದ ಕೈ ಮಾಜಿ ಶಾಸಕ
ಇದೇ ವೇಳೆ ಶಾಸಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆ ಏಕವಚನದಲ್ಲೇ ಮಾತನಾಡಿದ ಅವರು, ಪರಣ್ಣ ಈಶ್ವರಪ್ಪ ಮುನವಳ್ಳಿ ಬೆಳಗ್ಗೆ 5 ಗಂಟೆಯಿಂದಲೇ ಲಂಚ ತೆಗೆದುಕೊಳ್ಳುತ್ತಾನೆ. ಇಂತಹವರನ್ನು ನಮ್ಮ ಗಂಗಾವತಿ ಜನ ಗೆಲ್ಲಿಸುತ್ತಿದ್ದಾರೆ. ಪರಿಹಾರ ಹಣದಲ್ಲೂ ಪರ್ಸೆಂಟೇಜ್ ತೆಗೆದುಕೊಳ್ತಾನೆ. ಜನರಿಗೆ ಖೋಟಾ ನೋಟು ಕೊಟ್ಟು ವೋಟ್ ಹಾಕಿಸಿಕೊಂಡಿದ್ದಾನೆ. ಖೋಟಾ ನೋಟು ದಂಧೆಯಲ್ಲಿ ಸ್ವತಃ ಶಾಸಕನೇ ಭಾಗಿಯಾಗಿದ್ದಾನೆ. ಅವನನ್ನು ಎಸ್ಪಿ ಮಹಾಶಯ ಡಾ.ಅನೂಪ್ ಶೆಟ್ಟಿ ಬಚಾವ್ ಮಾಡುತ್ತಿದ್ದಾನೆ. ಎಸ್ಪಿ ಆರ್ಎಸ್ಎಸ್ ನವನು ಆಗಿದ್ದಾನೆ. ಅವನು ಸಂಬಂಧಪಡದವರನ್ನು ಒಳಗೆ ಹಾಕಿದ್ದಾನೆ ಅಷ್ಟೇ. ಇಂಥ ಪೊಲೀಸ್ ಗಿರಿ ಮಾಡುವ ಪೊಲೀಸರಿಗೆ ನಾನು ಹೆದರುವುದಿಲ್ಲ. ಮೊದಲು ಶಾಸಕ ಪರಣ್ಣನನ್ನು ಮತ್ತು ಆ ಎಸ್ಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ ಆತನ ಹಿಂಬಾಲಕರನ್ನು ವಿಚಾರಣೆಗೆ ಒಳಪಡಿಸಬೇಕು. ಆವಾಗ ಸತ್ಯ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv