ಬೆಂಗಳೂರು: ರಸ್ತೆ, ಬೀದಿಯಲ್ಲಿ ಜಗಳ ಮಾಡಿಕೊಂಡು ನಾವು ಒಂದಾಗಿದ್ದೇವೆ ಎಂದು ಹನಿಮೂನ್ ಹೋಗಿದ್ದರು. ನಡುವೆಯೇ ಮೈತ್ರಿ ಸರ್ಕಾರದ ಹನಿಮೂನ್ ಫೇಲ್ ಆದ್ರೆ ನಾವೇನು ಮಾಡಲು ಸಾಧ್ಯ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ವ್ಯಂಗ್ಯ ಮಾಡಿದ್ದಾರೆ.
ಮೈತ್ರಿ ಸರ್ಕಾರ ಗೊಂದಲ ಗೂಡಾಗಿರೋದು ಮಾತ್ರ ಸತ್ಯ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾರು ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಬಿಜೆಪಿ ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಅನಾವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಮಾಡೋದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಡಬೇಕು. ಕೈಲಾಗದವರು ಮೈ ಪರಚಿಕೊಂಡ್ರೆ ನಾವೇನೂ ಮಾಡೋಕೆ ಆಗುತ್ತೆ. ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎಂದು ಹೇಳುವ ಮೂಲಕ ಸರ್ಕಾರ ರಚನೆಯ ಸುಳಿವನ್ನು ನೀಡಿದರು.
125 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಮತ್ತು 37 ಶಾಸಕರನ್ನು ಹೊಂದಿರುವ ಜೆಡಿಎಸ್ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಯಾವ ಟೈಮ್ ನಲ್ಲಿ ಏನಾಗುತ್ತೆ ಗೊತ್ತಿಲ್ಲ. ನಾವು ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಎಲ್ಲದಕ್ಕಿಂತ ದೊಡ್ಡವನು ಮೇಲೆ ಇದ್ದಾನೆ. ತುಂಬಾ ದಿನ ಪಾಪದ ಕೆಲಸ ಮಾಡೋದು ಒಳ್ಳೆಯದಲ್ಲ.ಪಾಪದ ಕೊಡದ ತುಂಬಿದಾಗ ಏನ್ ಆಗಬೇಕೋ ಅದು ಆಗುತ್ತೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಿ. ಸೋಮಣ್ಣ ಗುಡುಗಿದರು.