– ಕಾಂಗ್ರೆಸ್ಗೆ ಜನರಿಂದ ಚೋರ್ ಬಿರುದು
– ಜಾಧವ್ ನಮ್ಮ ಅಭ್ಯರ್ಥಿ, ಖರ್ಗೆ ವಿರುದ್ಧ ಗೆಲುವು ನಿಶ್ಚಿತ
ಕಲಬುರಗಿ: ಸಿಎಂ ಎಚ್.ಡಿ ಕುಮಾರಸ್ವಾಮಿ ಸುಳ್ಳಿನ ಸರದಾರ, ಕುಣಿಯೋಕೆ ಬರದಿದ್ದರೆ ನೆಲ ಡೊಂಕು ಅಂತಾರೆ ಎಂದು ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಾಲಮನ್ನಾದ ಬಗ್ಗೆ ಪದೇ ಪದೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ, ಆದರೆ ಸಾಲ ಮನ್ನಾದ ಬಗ್ಗೆ ಇದೂವರೆಗೆ ಸ್ಪಷ್ಟವಾದಂತಹ ನಿರ್ಧಾರ ತೆಗೆದುಕೊಂಡಿಲ್ಲ. ನಿನ್ನೆ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಹಾಗೂ ಖರ್ಗೆ ಕೆಂಡದಂತಹ ಬಿಸಿಲಿನಲ್ಲೂ ಹಸಿ ಸುಳ್ಳಿನ ಭಾಷಣ ಮಾಡಿದ್ದು, ಜನರು ಕಾಂಗ್ರೆಸ್ಗೆ ಚೋರ್ ಎಂಬ ಬಿರುದು ಕೊಟ್ಟಿದ್ದಾರೆ. ರಫೆಲ್ ಎಂಬುದು ಹಗರಣವಲ್ಲ, ಬದಲಿಗೆ ಅದು ವಿವಾದತ್ಮಕ ಪ್ರಕರಣ, ಆದ್ರೆ ಯುಪಿಎ ಸರ್ಕಾರ ಬೊಫೋರ್ಸ್ ಹಿಡಿದು ಅದನ್ನು ಹಗರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬಳಿಕ ಚಿಂಚೋಳಿ ಶಾಸಕರಾಗಿದ್ದ ಉಮೇಶ್ ಜಾಧವ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ, ಖರ್ಗೆ ವಿರುದ್ಧ ಜಾಧವ್ ಗೆಲವು ನಿಶ್ಚಿತ ಅಂತ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಜಾಧವ್ ಅವರು ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದಾರೆ, ರಾಜೀನಾಮೆ ಅಂಗೀಕರಿಸುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಒಪ್ಪಿಕೊಳ್ಳಲೇಬೇಕು. ಜಾಧವ್ ಅವರ ರಾಜೀನಾಮೆ ಅಂಗೀಕಾರ ಮಾಡಲು ಸಮ್ಮಿಶ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಅಂತ ಆರೋಪಿಸಿದರು.