– ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ, ನಮ್ಮವರು ವಿಫಲರಾಗಿದ್ದಾರೆ: ಶಾಸಕ ಜಿಟಿಡಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರಿಗೆ ಬದಲಾಗಿ, ಜುಲೈ 31ರ ವರೆಗೆ 8 ಸಾವಿರ ಕ್ಯುಸೆಕ್ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ಸೇರಿದಂತೆ ಇತರ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಅಗತ್ಯವಿದ್ದರೆ ಕಾವೇರಿ ನೀರಿನ (Cauvery Water) ವಿಚಾರದಲ್ಲಿ ಸುಪ್ರೀಂ ಕೋರ್ಟ್ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ವರೆಗೂ ಹೋಗೋಣ:
ಕಳೆದ ವರ್ಷ ಬರಗಾಲ ಇತ್ತು, ಈಗೇನೋ ಅಲ್ಪಸ್ವಲ್ಪ ಮಳೆ ಬಂದು ನೀರು ಬಂದಿದೆ. ಇಂಥ ಸಮಯದಲ್ಲಿ ಕಾವೇರಿ ನಿರ್ವಹಣಾ ಸಮಿತಿ ಆದೇಶ ಆಘಾತ ತಂದಿದೆ. ಇಂತಹ ಸಮಯದಲ್ಲಿ ನೀರು ಬಿಡುವುದು ಸರಿಯಲ್ಲ ಅಂತ ಹೇಳಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಳಿ ಮೇಲ್ಮನವಿ ಹಾಕಿ ಅಂದಿದ್ದೇವೆ, ಬೇಕಾದ್ರೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವರೆಗೂ ಹೋಗೋಣ ಅಂತ ಸಲಹೆ ಕೊಟ್ಟಿದ್ದೇವೆ. ಆದರೆ ಸಿಎಂ, ಎಜಿ ಅವರೆಲ್ಲ ಏಕಾಏಕಿ ಆಗಲ್ಲ ಅಂದರೆ ಹಿನ್ನಡೆ ಆಗಲಿದೆ, ಅಲ್ಪಸ್ವಲ್ಪ ಬಿಡೋಣ ಅಂದಿದ್ದಾರೆ. ಜೊತೆಗೆ ನೀರಿನ ಪ್ರಮಾಣ ಕಡಿಮೆ ಮಾಡಲು ಮನವಿ ಮಾಡುವಂತೆ ಪ್ರಧಿಕಾರದ ಬಳಿ ಮನವಿ ಮಾಡುವುದಾಗಿ ಸಿಎಂ ಹೇಳಿದ್ದಾರೆಂದು ತಿಳಿಸಿದ್ದಾರೆ.
ಮೊದಲು ಕುಚಿಕುಗಳ ಮನವೊಲಿಸಲಿ:
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ತಮಿಳುನಾಡಿನಲ್ಲಿ ಇಂಡಿ ಒಕ್ಕೂಟದ ಸರ್ಕಾರ ಇದೆ. ಅವರನ್ನು ಕಾಂಗ್ರೆಸ್ ಮನವೊಲಿಸಲಿ. ಆಗ ಕೇಂದ್ರವೂ ಬೇಡ, ಸುಪ್ರೀಂ ಕೋರ್ಟು ಬೇಡ. ಜಗಳ ಇಲ್ಲದೆಯೇ ಸಮಸ್ಯೆ ಬಗೆಹರಿಸಬಹುದು. ತಮಿಳುನಾಡು ಸರ್ಕಾರ ಇವರ ಕುಚಿಕು, ಹಾಗಾಗಿ ಮೊದಲು ಅವರ ಮನವೊಲಿಸಲಿ. ಕೇಂದ್ರಕ್ಕೆ ನಿಯೋಗ ಅಗತ್ಯವೇ ಇರಲ್ಲ ಎಂದು ಕುಟುಕಿದ್ದಾರೆ.
ಸರ್ವ ಪಕ್ಷ ಸಭೆಗೆ ಇವರು ಆಹ್ವಾನ ಕೊಟ್ಟಿದ್ದು ಒಂದು ದಿನದ ಹಿಂದೆ. ಆದರೂ ನಾವು ಬಂದಿದ್ದೇವೆ, ಅಭಿಪ್ರಾಯ ಹೇಳಿದ್ದೇವೆ. ಮುಂಚಿತವಾಗಿ ಆಹ್ವಾನ ಬಂದಿದ್ದಿದ್ರೆ ಎಲ್ಲರೂ ಸಮಯ ಸರಿ ಮಾಡಿಕೊಂಡು ಬರುತ್ತಿದ್ದರು. ಇನ್ಮುಂದೆಯಾದರೂ ಇಂತಹ ಸಭೆಗಳಿಗೆ ಮುಂಚಿತವಾಗಿ ಆಹ್ವಾನ ಕೊಡಲಿ ಎಂದು ಸಿ.ಟಿ ರವಿ ಸಲಹೆ ನೀಡಿದ್ದಾರೆ.
ತಮಿಳಿನಾಡಿನವರು ಸಮರ್ಥವಾಗಿ ವಾದಿಸಿದ್ದಾರೆ:
ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಕಾವೇರಿ ಪ್ರಾಧಿಕಾರದಲ್ಲಿ ಸಮರ್ಥವಾಗಿ ವಾದ ಮಾಡುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ತಮಿಳಿನಾಡಿನವರು ಸಮರ್ಥವಾಗಿ ವಾದ ಮಾಡಿದ್ದರಿಂದ ಅವರ ಪರವಾಗಿ ತೀರ್ಪು ಬರ್ತಿದೆ. ಕಬಿನಿಯಲ್ಲಿ ನೀರು ತುಂಬಿದೆ ಡ್ಯಾಮ್ ಸುರಕ್ಷತೆ ದೃಷ್ಟಿಯಿಂದ ನೀರು ಬಿಟ್ಟಿದ್ದೇವೆ. ಭದ್ರತಾ ದೃಷ್ಟಿಯಿಂದ ನೀರನ್ನ ಬಿಡ್ತೇವೆ ಎಂದಿದ್ದಾರೆ. ಒಳಹರಿವು ನಿಂತರೆ ನೀರು ಬಿಡೋದನ್ನ ನಿಲ್ಲಿಸ್ತೇವೆ ಎಂದಿದ್ದಾರೆ, ನಾವು ಅದೇ ಹೇಳಿದ್ದೇವೆ. ರೈತರಿಗೆ ನೀರು ಸರಿಯಾಗಿ ಕೊಡಬೇಕು ಇಲ್ಲದೇ ಹೋದರೆ ಸಮಸ್ಯೆಯಾಗುತ್ತೆ. ಕಳೆದ ವರ್ಷ ಬರಗಾಲದಲ್ಲಿ ಸಾಕಷ್ಟು ಸಮಸ್ಯೆಯನ್ನ ರೈತರು ಅನುಭವಿಸಿದ್ದಾರೆ. ನೀರಿಲ್ಲದಿದ್ದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಕೇಳಬೇಕು. ಸಮರ್ಥವಾಗಿ ಕಾವೇರಿ ಪ್ರಾಧಿಕಾರದಲ್ಲಿ ವಾದವನ್ನ ಮಂಡಿಸಬೇಕು. ಅದಕ್ಕಾಗಿ ಮೇಲ್ಮನವಿ ಸಲ್ಲಿಸಲು ಸಲಹೆ ನೀಡಿದ್ದೇವೆ ಎಂದು ವಿವರಿಸಿದ್ದಾರೆ.