– ಸರ್ಕಾರ ಉರುಳಿಸಲು ಯಾವುದೇ ಪ್ರಯತ್ನ ಮಾಡಲ್ಲ
ಚಿಕ್ಕಬಳ್ಳಾಪುರ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಕಾಯಿ ಜ್ಯೋತಿಷ್ಯವನ್ನು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಲಿತಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತದೆ. ಆದರೆ ನಾವು ಯಾವುದೇ ಪ್ರಯತ್ನ ಮಾಡಲ್ಲ. ಚುನಾವಣಾ ಬಳಿಕ ಮೈತ್ರಿ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಕಾಂಗ್ರೆಸ್ನವರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಿದ್ದು ಹೋದರೆ ನಮಗೆ ಸಂಬಂಧವಿಲ್ಲ ಎಂದು ಹೇಳಿದರು.
ಸಂಸದ, ಚಿಕ್ಕಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಎಂದರೆ ಸುಳ್ಳು, ಸುಳ್ಳು ಎಂದರೆ ವೀರಪ್ಪ ಮೊಯ್ಲಿ. ಅವರು ಎಲ್ಲೆಲ್ಲಿ ಕಲ್ಲು ಹಾಕಿದ್ದಾರೋ ಅಲ್ಲಿ ಕೆಟ್ಟದ್ದಾಗಿದೆ ಎಂದು ಲೇವಡಿ ಮಾಡಿದರು.
ನಾನು ರಾಜ್ಯದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದೇನೆ. ಈ ಬಾರಿ ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೈಕಮಾಂಡ್ ಗುರಿ ನೀಡಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಹೀಗಾಗಿ 22 ಸ್ಥಾನ ಗೆಲ್ಲಲು ಸಮಸ್ಯೆಯಿಲ್ಲ. ಸಮ್ಮಿಶ್ರ ಸರ್ಕಾರ ಜಗಳದ ಸರ್ಕಾರವಾಗಿದೆ. ಮಂಡ್ಯ, ತುಮಕೂರು, ಮೈಸೂರಿನಲ್ಲಿ ಎರಡೂ ಪಕ್ಷದವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು.