ಬೆಂಗಳೂರು: ಶನಿವಾರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭಾ ಮತ್ತು ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರ ಹಾಗು ಎರಡು ವಿಧಾನಸಭಾ ಉಪಚುನಾವಣೆಗ ದಿನಾಂಕವನ್ನು ನಿಗದಿ ಮಾಡಿದೆ. ಇತ್ತ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಉಪ ಚುನಾವಣೆ ಅನಗತ್ಯವಾಗಿತ್ತು. ಕೊನೆ ಕ್ಷಣದವರೆಗೂ ಲೋಕಸಭಾ ಉಪಚುನಾವಣೆ ಇರುವುದಿಲ್ಲ ಎಂದೇ ಭಾವಿಸಿದ್ದೆವು. ಈಗ ಆಯ್ಕೆ ಆಗುವವರು ಕೇವಲ ಐದು ತಿಂಗಳು ಮಾತ್ರ ಸಂಸತ್ ಸದಸ್ಯರಾಗಿರುತ್ತಾರೆ. ಈ ಕಾರಣದಿಂದ ಯಾವುದೇ ಪಕ್ಷದವರಿಗೂ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಚುನಾವಣಾ ಆಯೋಗದ ತೀರ್ಮಾನವನ್ನು ಅನಿವಾರ್ಯವಾಗಿ ಸ್ವಾಗತಿಸುತ್ತೇವೆ ಎಂದರು.
ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ. ಶಿವಮೊಗ್ಗದ ಅಭ್ಯರ್ಥಿ ಇಂದು ಹಾಗೂ ಮಂಡ್ಯ ಅಭ್ಯರ್ಥಿಯನ್ನು ಸೋಮವಾರ ಅಂತಿಮಗೊಳಿಸಲಿದ್ದೇವೆ. ಪ್ರಧಾನಿ ಮೋದಿಯವರ ಸಾಧನೆಯನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಇದನ್ನು ಇಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸುತ್ತೆವೆ. ಈ ಉಪ ಚುನಾವಣೆ ಮುಂದಿನ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತ ಬಿಜೆಪಿ ಶಾಸಕ ಸುರೇಶ್ ಕುಮಾರ್, ಈಗ ಸಂಸತ್ಗೆ ಆಯ್ಕೆಯಾಗುವ ಅಭ್ಯರ್ಥಿಗಳ ಅಧಿಕಾರ ಅವಧಿ ಗರಿಷ್ಠ ನಾಲ್ಕು ತಿಂಗಳ ಮಾತ್ರ. ಉಪ ಚುನಾವಣೆ ಬೇಕಿತ್ತಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv