ಶಿವಮೊಗ್ಗ: ಜನತೆಗೆ ಅಧಿಕವಾಗಿ ಬೆಲೆಗಳನ್ನು ಏರಿಕೆ ಮಾಡಿ, ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದಾರೆ. ಈ ಕೆಲಸ ಮಾಡೋಕೆ ಮುಖ್ಯಮಂತ್ರಿ ಬೇಕಿತ್ತಾ? ಯಾರೋ ಒಬ್ಬ ಗುಮಾಸ್ತ ಮಾಡುತ್ತಿದ್ದ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಬಜೆಟ್ ಬಗ್ಗೆ ಟೀಕೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ ಬಜೆಟ್ ನಿಂದ ಕರಾವಳಿ ಭಾಗದ ಜನರಿಗೆ ಅನ್ಯಾಯವಾಗಿದೆ. ಈ ಬಜೆಟ್ ನಿಂದ ಅವರ ಜನರು ತೃಪ್ತರಾಗಿಲ್ಲ. ಅವರ ಶಾಸಕರು ಕೂಡ ತೃಪ್ತರಾಗಿಲ್ಲ. ಅವರು ಅಧಿಕಾರಕ್ಕೆ ಬರುವುದಕ್ಕೆ ಸಹಾಯ ಮಾಡಿದ ಕಾಂಗ್ರೆಸ್ ಅವರೂ ಕೂಡ ಈ ಬಜೆಟ್ ಮಂಡನೆಯಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ.
ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಿಸಿ ರೈತರ ಸಾಲ ಮನ್ನಾ ಮಾಡುತ್ತಿದ್ದಾರೆ. ಈ ಕೆಲಸ ಮಾಡೋಕೆ ಮುಖ್ಯಮಂತ್ರಿ ಬೇಕಿತ್ತಾ? ಯಾರೋ ಒಬ್ಬ ಗುಮಾಸ್ತ ಮಾಡುತ್ತಿದ್ದ. ರೈತರ ಸಾಲ ಇಷ್ಟೊಂದು ಗೊಂದಲ ಆಗಲು ಸಿಎಂ ಕುಮಾರಸ್ವಾಮಿ ಅವರೊಬ್ಬರೇ ಕಾರಣ. ರೈತರ ಸಂಪೂರ್ಣ ಸಾಲಮನ್ನಾ ಆಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಜೆಟ್ ಬಗ್ಗೆ ಟೀಕೆ ಮಾಡಿದ್ದಕ್ಕೆ ಲಘುವಾಗಿ ಮಾತನಾಡಿದ ಸಿಎಂ ಬಗ್ಗೆ ತೀವ್ರವಾಗಿ ಆಕ್ಷೇಪ ಮಾಡಿದ ಈಶ್ವರಪ್ಪ, ವಿಪಕ್ಷದ ಬಗ್ಗೆ ಸಿಎಂ ಹಲ್ಲು ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಾವು ಸರ್ಕಾರವನ್ನು ಟೀಕೆ ಮಾಡುತ್ತಿದ್ದೀವಿ. ಸಲಹೆ ಕೊಟ್ಟಿದ್ದೇವೆ, ನಾವು ದೇವೇಗೌಡ, ರೇವಣ್ಣ ಸೇರಿ ನಿಮ್ಮ ಕುಟುಂಬದ ಬ್ಯುಸಿನೆಸ್ ಬಗ್ಗೆ ಮಾತನಾಡಿಲ್ಲ. ವಿಪಕ್ಷಗಳ ಟೀಕೆಯನ್ನು ಸಮಾಧಾನದಿಂದ ಸ್ಪಂದಿಸಿ ಎಂದು ಸಲಹೆ ನೀಡಿದರು.