-ಕೋಳಿಗಾಗಿ ಮುಗಿಬಿದ್ದ ಜನರು
ಬೆಂಗಳೂರು: ನಗರದ ಹೊರವಲಯದ ಟಿ.ದಾಸರಹಳ್ಳಿ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದ ಬಿಜೆಪಿ ಮುಖಂಡ ಸುಮಾರು 2 ಸಾವಿರ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಸಾಬೂನು, ಕಾಳು, ಸಕ್ಕರೆ, ಬೇಳೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೋಳಿಯನ್ನು ಉಚಿತವಾಗಿ ವಿತರಿಸಿದ್ದಾರೆ.
ಟಿ.ದಾಸರಹಳ್ಳಿಯ ಮಾಜಿ ಶಾಸಕ ಎಸ್.ಮುನಿರಾಜು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮಾಜಿ ಶಾಸಕರು, ನಮ್ಮ ಈ ಕ್ಷೇತ್ರದ ಎಲ್ಲಾ ವಾರ್ಡ್ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಬಿಎಸ್ವೈ ಕ್ಯಾಂಟಿನ್ ಪ್ರಾರಂಭಿಸಿ, ಬಡ ಜನರ ಹಸಿವು ನೀಗಿಸುವ ಕೆಲಸವನ್ನು ನಮ್ಮ ಮುಖಂಡರು ಮಾಡುತ್ತಿದ್ದಾರೆ. ಚಿಕ್ಕ ಬೈಲಪ್ಪ ಅವರು ದವಸದಾನ್ಯ ಜೊತೆಗೆ ಭಾನುವಾರವಾದ್ದರಿಂದ ವಿಶೇಷವಾಗಿ ಕೋಳಿಯನ್ನು ಕೊಡುತ್ತಿದ್ದಾರೆ. ಜನರ ಅಂತರವನ್ನು ಕಾಯ್ದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಲಕ್ಷ್ಮಮ್ಮ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕ ಬೈಲಪ್ಪ, ಪಂಚಾಯಿತಿ ಅಧ್ಯಕ್ಷೆ ಶೃತಿ ಸುರೇಶ್, ಗಿರೀಶ್, ವಿನೋದ್ ಗೌಡ ಮತ್ತಿತರರು ಉಪಸ್ಥಿತರಿದ್ದರು.