ಧಾರವಾಡ: ಜಮೀನು ವಿಚಾರದಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಗುರುನಾಥಗೌಡ ಹಲ್ಲೆ ನಡೆಸಿದ ರೌಡಿ ಶಿಟರ್ ಆಗಿರುವ ಬಿಜೆಪಿ ಮುಖಂಡ. ಗುರುನಾಥಗೌಡ ಹೆಬ್ಬಳ್ಳಿ ಗ್ರಾಮದ ವಿಠ್ಠಲ್ ಭೀಮಕ್ಕನವರ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕಳೆದ ಕೆಲವು ವರ್ಷಗಳಿಂದ ಗುರುನಾಥಗೌಡ ಹಾಗೂ ಭೀಮಕ್ಕನವರ ಕುಟುಂಬದ ಮಧ್ಯೆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆದಿತ್ತು. ಅಲ್ಲದೇ ನ್ಯಾಯಾಲಯವು ಭೀಮಕ್ಕನವರ ಪರ ತೀರ್ಪು ನೀಡಿದ್ದು, ಜಮೀನು ಭೀಮಕ್ಕನವರ ಕುಟುಂಬದ ಕೈ ಸೇರಿತು. ಆದರೆ ಬುಧವಾರ ಜಮೀನಿನಲ್ಲಿ ಬಿತ್ತನೆ ಮಾಡಲು ಮುಂದಾದ ವಿಠ್ಠಲ್ ಭೀಮಕ್ಕನವರ ಹಾಗೂ ಅವರ ಸಹೋದರ ಮೇಲೆ ಗುರುನಾಥಗೌಡ ಹಾಗೂ ಆತನ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ತಮ್ಮ ಮೇಲೆ ಹಲ್ಲೆ ಮಾಡಲು ಗುರುನಾಥಗೌಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತಂದಿದ್ದ ಎಂದು ಹಲ್ಲೆಗೊಳಗಾದ ವಿಠ್ಠಲ್ ಹಾಗೂ ಆತನ ಸಹೋದರ ತಿಳಿಸಿದ್ದಾರೆ. ಈ ಕುರಿತು ಗುರುನಾಥಗೌಡನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.