ಬೆಂಗಳೂರು: ಬಿಜೆಪಿ (BJP) ಹೈಕಮಾಂಡ್ ಬಿಡುಗಡೆ ಮಾಡಿದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ. ರವಿ (C.T Ravi) ಅವರನ್ನು ಕೈ ಬಿಡಲಾಗಿದೆ. ಈ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ (Karnataka BJP President) ಸ್ಥಾನ ಒಲಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಸಿ.ಟಿ. ರವಿ ಇದ್ದಾರೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್ ಸಂತೋಷ್ ಅವರನ್ನು ಮುಂದುವರೆಸಲಾಗಿದೆ. ಕಳೆದ ವಾರವಷ್ಟೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿ.ಟಿ. ರವಿ ಭೇಟಿಯಾಗಿದ್ದರು. ಬಿಎಸ್ವೈ ಆಶೀರ್ವಾದ ಪಡೆದು, ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೇ ಇದು ಸೌಹಾರ್ದಯುತ ಭೇಟಿಯಷ್ಟೆ ಎಂದಿದ್ದರು. ಇದನ್ನೂ ಓದಿ: ಮುಖ ತೊಳೆಯಲು, ಬಟ್ಟೆ ಬದಲಿಸಲೂ ಅವಕಾಶ ಕೊಡಲಿಲ್ಲ: ಪೊಲೀಸರ ನಡೆಗೆ ಬಿಜೆಪಿ ಕಾರ್ಯಕರ್ತೆ ಆಕ್ರೋಶ
ನಿಜವಾಗುತ್ತಾ ಹೆಚ್ಡಿ ದೇವಗೌಡ ಭವಿಷ್ಯ?
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸಿ.ಟಿ ರವಿ, ವಿಪಕ್ಷ ನಾಯಕನ ಹುದ್ದೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರನ್ನು ಬಿಜೆಪಿ ಪರಿಗಣಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿಗೆ ಕೋಕ್ ನೀಡಲಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ಬಿಜೆಪಿ ಮೂರು ಹುದ್ದೆಗಳು ನಿರ್ಧಾರವಾಗುವ ಸಾಧ್ಯತೆ ಇದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಲಿಂಗಾಯತ ಸಮುದಾಯದ ಮುಖಂಡರಿಗೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮುಖಂಡರನ್ನು ಹಾಗೂ ಪರಿಷತ್ ವಿಪಕ್ಷ ನಾಯಕನ ಸ್ಥಾನವನ್ನು ಹಿಂದುಳಿದ ಸಮುದಾಯಕ್ಕೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಅಶ್ವತ್ಥನಾರಾಯಣ್ ಹೆಸರುಗಳು ಮುಂಚೂಣಿಯಲ್ಲಿದೆ. ವಿರೋಧ ಪಕ್ಷದ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಸವರಾಜ ಬೊಮ್ಮಾಯಿ ಹೆಸರು ಮುಂಚೂಣಿಯಲ್ಲಿದೆ. ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ರವಿಕುಮಾರ್ ಹೆಸರು ಮುಂಚೂಣಿಯಲ್ಲಿದೆ.
ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯಲ್ಲೂ ಲಿಂಗಾಯತ, ಹಿಂದುಳಿದ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಪ್ರಧಾನ ಕಾರ್ಯದರ್ಶಿ ಸ್ಥಾನ ಸಾಧ್ಯತೆ ಇದೆ. ಲಿಂಗಾಯತ ಸಮುದಾಯಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ಕೊಟ್ಟರೆ ವಿರೋಧ ಪಕ್ಷದ ಉಪನಾಯಕನ ಸ್ಥಾನ ಒಬಿಸಿ ಸಮುದಾಯಕ್ಕೆ, ಒಕ್ಕಲಿಗ ಸಮುದಾಯಕ್ಕೆ ವಿಪ್ ಸ್ಥಾನ ಸಿಗುವ ಸಾಧ್ಯತೆ ಇದೆ. ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಒಬಿಸಿ ನೇಮಕವಾದರೆ, ಪರಿಷತ್ ಉಪನಾಯಕನ ಸ್ಥಾನಕ್ಕೆ ಎಸ್ಸಿ ಸಮುದಾಯಕ್ಕೆ ಹಾಗೂ ಲಿಂಗಾಯತ ಸಮುದಾಯಕ್ಕೆ ವಿಪ್ ಸ್ಥಾನ ಸಾಧ್ಯತೆ ಇದೆ. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್ಗೆ ಸುಧಾಕರ್ ಸವಾಲು
Web Stories