ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಬಿಜೆಪಿ (BJP) ಮುಖಂಡ ಆಯನೂರು ಮಂಜುನಾಥ್ (Ayanur Manjunath) ರಾಜೀನಾಮೆ (Resignation) ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಶಿವಮೊಗ್ಗದಲ್ಲಿ (Shivamogga) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ನಗರದ ಜನರ ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವ ಉದ್ದೇಶ ನನ್ನದು. ಫ್ಲೆಕ್ಸ್ನಲ್ಲಿ ಹೇಳಿದಂತೆ ಹರಕು ಬಾಯಿ ಹೊಲಿದು ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ನನ್ನ ಪ್ರಯತ್ನಕ್ಕೆ ಈಗಾಗಲೇ ಸ್ವಲ್ಪ ಮಟ್ಟಿಗೆ ಫಲ ದೊರೆತಿದೆ. ಅಶಾಂತ ನಗರ ಎಂಬ ಅಪಖ್ಯಾತಿಯಿಂದ ಶಿವಮೊಗ್ಗವನ್ನು ಮುಕ್ತವಾಗಿಸಲು ನಾನು ಬದ್ಧ. ಆ ಮೂಲಕ ನಗರಕ್ಕೆ ಉದ್ಯಮಗಳು ಬರುವಂತೆ ಮಾಡಿ ಉದ್ಯೋಗಾವಕಾಶ ಕಲ್ಪಿಸಬಯಸಿದ್ದೇನೆ ಎಂದು ನುಡಿದಿದ್ದಾರೆ.
ಕುಬೇರರು ಮತ್ತು ಬಲಾಢ್ಯರ ಎದುರು ಸ್ಪರ್ಧೆ ಮಾಡುತ್ತಿದ್ದು ನಗರದ ಜನತೆ ನನ್ನ ಬೆಂಬಲಿಸಲು ಮನವಿ ಮಾಡುತ್ತೇನೆ. ತೆನೆ ಹೊರುತ್ತೇನೋ ಇಲ್ಲವೋ ಎಂಬ ಬಗ್ಗೆ ಕೆಲ ನಾಯಕರ ಜೊತೆ ಮಾತನಾಡಿ ನಿರ್ಧರಿಸುತ್ತೇನೆ. ಅದು ರಾಜ್ಯದ ರಾಜಕೀಯ ಪಕ್ಷದ ನಾಯಕರೊಂದಿಗೆ ಎನ್ನುವ ಮೂಲಕ ಜೆಡಿಎಸ್ ಸೇರುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಕ್ಯಾಂಪೇನ್ – ಶಿಗ್ಗಾಂವಿ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ

