ಮಂಡ್ಯ: ದೇವರಿಗೆ ಮೊದಲ ಪೂಜೆ ಸಲ್ಲಿಸುವ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜಗಳವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಬಿಲ್ಲೇನಹಳ್ಳಿಯಲ್ಲಿ ಜರುಗಿದೆ.
ಗುರುವಾರ ಬಿಲ್ಲೇನಹಳ್ಳಿಯ ಗವಿರಂಗನಾಥ ಸ್ವಾಮಿಯ ರಥೋತ್ಸವ ಜರುಗಿತು. ಈ ವೇಳೆ ದೇವರಿಗೆ ಮೊದಲ ಪೂಜೆ ನಾನು ಮಾಡಬೇಕೆಂದು ಜೆಡಿಎಸ್ ತಾಲೂಕು ಪಂಚಾಯತಿ ಸದಸ್ಯ ರಾಜಹುಲಿ ದಿನೇಶ್ ಬರುತ್ತಾರೆ. ಇದೇ ವೇಳೆ ಬಿಜೆಪಿ ಮುಖಂಡರು ಮೊದಲ ಪೂಜೆ ಕ್ಷೇತ್ರದ ಶಾಸಕರು ಮಾಡಬೇಕು. ಹಿಂದಿನಿಂದಲೂ ಹಾಗೆ ನಡೆದುಕೊಂಡು ಬಂದಿದೆ ಎಂದು ಮಾತಿಗೆ ಮಾತು ಬೆಳೆಯುತ್ತದೆ.
ಶಾಸಕ ನಾರಾಯಣಗೌಡ ಕೂಡ ಪೂಜೆ ವಿಚಾರದ ಬಗ್ಗೆ ಮಾತನಾಡುತ್ತಾರೆ. ಎರಡು ಬಣದ ಮುಖಂಡರು ಈ ವಿಚಾರವಾಗಿ ಮಾತಿಗೆ ಮಾತು ಬೆಳೆಸುತ್ತಾರೆ. ಮಾತುಕತೆ ವಿಕೋಪಕ್ಕೆ ಹೋಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನ ಮಾಡಲು ಮುಂದಾಗುತ್ತಾರೆ. ನಂತರ ಪೊಲೀಸರು ರಾಜಹುಲಿ ದಿನೇಶ್ರನ್ನು ಕರೆದೊಯ್ಯುತ್ತಾರೆ. ಬಳಿಕ ಗಲಾಟೆ ತಣ್ಣಗಾದಗ ಶಾಸಕ ನಾರಾಯಣಗೌಡ ಗವಿರಂಗನಾಥಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ.