ಬೆಂಗಳೂರು: ರಾಜ್ಯದ ಜನರ ಸಮಸ್ಯೆಗೆ ಕಿವಿಯಾಗಬೇಕಿದ್ದ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ರೆಸಾರ್ಟ್ ಹೊಕ್ಕಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸದ್ಯ ರೆಸಾರ್ಟ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.
ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ನೋಡಿ ಜನರು ಬೇಸತ್ತಿದ್ದಾರೆ. ಇಷ್ಟು ದಿನ ಅತೃಪ್ತ ಶಾಸಕರು ರೆಸಾರ್ಟ್ ಸೇರಿದ್ದರು. ಆದರೆ ಈಗ ರಾಜ್ಯದ ಆಡಳಿಕ ಪಕ್ಷ ಹಾಗೂ ವಿರೋಧ ಪಕ್ಷದ ಕೆಲ ನಾಯಕರು ರೆಸಾರ್ಟ್ ರಾಜಕೀಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕಾಗಿರುವ ನಾಯಕರೇ ಹೀಗೆ ರೆಸಾರ್ಟ್ ರಾಜಕೀಯ ಮಾಡಿಕೊಂಡು ಇದ್ದರೆ ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ.
ಒಂದೆಡೆ ಜೆಡಿಎಸ್ ಶಾಸಕರು ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ. ಅಲ್ಲದೆ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ತಂಗಿದ್ದಾರೆ.
ದೋಸ್ತಿ ಸರ್ಕಾರವನ್ನು ಉಳಿಸಲು ವಿಶ್ವಾಸಮತ ಸಾಬೀತುಪಡಿಸಲು ಸಿಎಂ ಸರ್ಕಸ್ ಮುಂದುವರಿಸಿದ್ದಾರೆ. ಜೆಡಿಎಸ್ ಶಾಸಕರು ತಂಗಿದ್ದ ರೆಸಾರ್ಟ್ ಗೆ ರಾತ್ರಿ 11 ಗಂಟೆಗೆ ಆಗಮಿಸಿ ಸಿಎಂ ಶಾಸಕರ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಸಿಎಂ ಮಧ್ಯರಾತ್ರಿ 1 ಗಂಟೆ 35 ನಿಮಿಷಕ್ಕೆ ಮರಳಿದರು. ಹಾಗೆಯೇ ಸಿಎಂ ಬಹುಮತ ಸಾಬೀತು ಮಾಡ್ತಾರೆ, ಸರ್ಕಾರ ಉಳಿಯುತ್ತೆ ಎಂದು ಸಚಿವ ಸಾರಾ ಮಹೇಶ್ ಹಾಗೂ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.