ನವದೆಹಲಿ: ಪ್ರವಾಹಕ್ಕೆ ಅನುದಾನ ಪ್ರಕಟಿಸದ್ದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸಂಸದರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ನೆರೆ ಪರಿಹಾರವನ್ನು ಪ್ರಶ್ನಿಸಿ ರಾಜ್ಯ ಸಂಸದರ ಹೇಳಿಕೆಗಳನ್ನು ಯತ್ನಾಳ್ ಅವರು ಟೀಕೆ ಮಾಡಿದ್ದರು. ಅಲ್ಲದೇ ಸಂಸದ ಈ ನಡೆಯಿಂದ ಮೋದಿ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದಿದ್ದರು.
ಯತ್ನಾಳ್ ಅವರ ಈ ಹೇಳಿಕೆಯಿಂದ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು, ಕೇಂದ್ರ ಶಿಸ್ತು ಸಮಿತಿಯ ಓಂ ಪಾಠಕ್ ಅವರು ನೋಟಿಸ್ ನೀಡಿದ್ದಾರೆ. ನೆರೆ ಪರಿಹಾರ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೇ ಈ ಹೇಳಿಕೆಯ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಪಕ್ಷ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂಬುವುದರ ಕುರಿತು ವಿವರಣೆಯನ್ನು 10 ದಿನಗಳ ಒಳಗೆ ನೀಡಲು ಸೂಚನೆ ನೀಡಿದ್ದಾರೆ. ನೋಟಿಸ್ ವಿವರಣೆ ನೀಡದಿದ್ದರೆ ಪಕ್ಷದ ನಿಯಮಗಳ ಅನ್ವಯ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನೋಟಿಸ್ನಲ್ಲೇನಿದೆ?
ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಓಂ ಪಾಠಕ್ ಅವರಿಂದ ನೋಟಿಸ್ ಜಾರಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪಕ್ಷದ ನಾಯಕರಾಗಿ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂಬ ಆರೋಪವನ್ನು ಮಾಡಿ ಸರ್ಕಾರ ಮೇಲೆ ಜನರಿಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಿದ್ದೀರಿ. ಈ ಬಗ್ಗೆ ಪಕ್ಷದ ನಾಯಕರಾಗಿ ವಿವರಣೆ ನೀಡಿ ಎಂದು ಸೂಚಿಸಲಾಗಿದೆ.
ಯತ್ನಾಳ್ ಹೇಳಿದ್ದೇನು?
ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಅಂತ ನಮೋ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದರು. ಸೂಲಿಬೆಲೆ ಅವರ ಈ ಹೇಳಿಕೆ ಬೆಂಬಲ ನೀಡಿದ್ದ, ಬಿಜೆಪಿ ಶಾಸಕ ಯತ್ನಾಳ್ ಅವರು, ಸೂಲಿಬೆಲೆಗೆ ಬೈಯ್ದು, ಪ್ರಧಾನಿ ಮೋದಿಗೆ ಅವಮಾನ ಮಾಡಬೇಡಿ. ರಾಜ್ಯದ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಹುಬ್ಬಳ್ಳಿ- ಬೆಂಗಳೂರಿನಲ್ಲಿ ಇರುವ ಬದಲು ಮೊದಲು ದೆಹಲಿಗೆ ಹೋಗಿ ಕೆಲಸ ಮಾಡಿ. ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.