ನವದೆಹಲಿ: ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ನಾಯಕ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿಕಾರಿದ್ದಾರೆ.
ಬಿಹಾರದ ಸಿಎಂ ನಿತೀಶ್ ಕುಮಾರ್ ನಿರ್ಧಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಬಂಧವನ್ನು ಕಡಿದುಕೊಳ್ಳುವ ಮತ್ತು ರಾಜ್ಯದ ಹಳೆಯ ಪಕ್ಷವಾದ ಆರ್ಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಿತೀಶ್ ಕುಮಾರ್ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಈ ವೇಳೆ ಅವರು, ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಬಿಜೆಪಿ ಪಕ್ಷ ಮಾತ್ರ ರಾಷ್ಟ್ರದಲ್ಲಿ ಉಳಿಯುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಮಹಾರಾಷ್ಟ್ರದಂತಹ ಪರಿಸ್ಥಿತಿಯನ್ನು ನಿತೀಶ್ ತಪ್ಪಿಸಿದ್ದಾರೆ ಎಂದು ಪ್ರಶಂಸೆಯ ಮಾತುಗಳನ್ನು ಹಾಡಿದರು. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ
ಮಹಾರಾಷ್ಟ್ರದಲ್ಲಿ ಏನಾಯಿತು ಎಂಬುದನ್ನು ನೋಡಿದರೆ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸಮ್ಮಿಶ್ರ ಮುಂದುವರಿಸಿದ್ರೆ ಏನಾಗಬಹುದು ಎಂಬ ಕಲ್ಪನೆಯನ್ನು ನಾವು ಪಡೆಯಬಹುದು. ಆದ್ದರಿಂದ ಅವರು ತಕ್ಷಣವೇ ರಾಜೀನಾಮೆ ನೀಡಿದರು. ಬಿಜೆಪಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದರು ಎಂದು ಹೇಳಿದರು.
ಬಿಜೆಪಿ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ. ಪ್ರಕಾಶ್ ಸಿಂಗ್ ಬಾದಲ್ ಅವರಿಗೂ ಅದೃಷ್ಟ ಇತ್ತು. ಅದೇ ರೀತಿ ಏಕನಾಥ್ ಶಿಂಧೆ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯಾಯಿತು. ಬಿಹಾರ ಕೂಡ ಅಂತಹ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿತ್ತು ಎಂದು ತಿಳಿಸಿದರು.