ಗದಗ: ಕಾವೇರಿ ವಿಚಾರ ಸೇರಿದಂತೆ ನೆಲ, ಜಲ, ಭಾಷೆ ವಿಚಾರದಲ್ಲಿ ಬಿಜೆಪಿ (BJP) ಬರೀ ರಾಜಕೀಯ ಮಾಡ್ತಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗ್ತಿದೆ. ಕಾರಣ ಈಗಾಗಲೆ ಅವರು ಸೋತು ಸುಣ್ಣವಾಗಿದ್ದಾರೆ. ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೆ ಅಧಿವೇಶನ ಮುಗಿಸಿದರು. ಅವರ ಪಕ್ಷದಲ್ಲಿ ಹತಾಶರಾಗಿ ಪಕ್ಷವನ್ನು ಬಿಡುವ ಹಂತದಲ್ಲಿ ಬಹಳಷ್ಟು ಜನರು ಇದ್ದಾರೆ. ಹೀಗಾಗಿ ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುತ್ತಿದ್ದಾರೆ ಎಂದರು.
ಅಷ್ಟೇ ಅಲ್ಲಾ ಭಾವನಾತ್ಮಕ ಸಂಬಂಧಗಳನ್ನು ಕೇರಳಿಸುವಂತಹ ಕೆಲಸ ಬಿಜೆಪಿ ಮಾಡ್ತಿದೆ. ಹಿಜಬ್, ಹಲಾಲ್, ಧರ್ಮ, ಜಾತಿ, ಭಾವನಾತ್ಮಕ ವಿಷಯಗಳನ್ನು ಕೆದಕುವುದು ಇವರ ಕೆಲಸ ಅಲ್ವಾ? ಬಿಜೆಪಿ ತೊರೆದು ಕಾಂಗ್ರೆಸ್ಗೆ ಕೆಲವರು ಸೇರ್ಪಡೆಯಾಗುವ ವಿಚಾರವಾಗಿ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ಗೆ ಯಾರು ಬರ್ತಾರೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲರನ್ನು ಕಣ್ಣು ಮುಚ್ಚಿ ತಗೆದುಕೊಳ್ಳಲ್ಲ. ಸ್ಥಳೀಯ ನಾಯಕರು, ಕಾರ್ಯಕರ್ತರ ಒಪ್ಪಿಗೆ ಪಡೆದು, ಅವರಿಂದ ಪಕ್ಷಕ್ಕೆ ಬಲ ಬರುತ್ತೆ ಎನ್ನುವವರನ್ನು ಸೇರ್ಪಡೆ ಮಾಡಿಕೊಳ್ಳತ್ತಾರೆ ಎಂದರು.
ಇನ್ನು ಮರ್ಯಾದೆ ಇದ್ದವರು ಯಾರು ಕಾಂಗ್ರೆಸ್ಗೆ ಹೋಗೊದಿಲ್ಲ ಎಂಬ ಸಿಟಿ ರವಿ ಹೇಳಿಕೆಗೆ ಮಾತಿನ ತಿರುಗೇಟು ನೀಡಿದ ಅವರು, ಜನರು ಮರ್ಯಾದೆ ಕೊಟ್ಟು ಬಿಜೆಪಿ ಹಾಗೂ ಸಿಟಿ ರವಿ ಮನೆಗೆ ಕಳುಹಿಸಿದ್ದಾರೆ. ಆಗ 40% ಸರ್ಕಾರ ಅಂತಾ ಹೇಳಿ ಮರ್ಯಾದೆ ಜಾಸ್ತಿ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್ಗೆ 136 ಸೀಟು ಕೊಟ್ಟು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುನಿಯಪ್ಪ ಅವರ ಹೇಳಿಕೆ ಹೈಕಮಾಂಡ್ ತಿರ್ಮಾನ ಮಾಡುತ್ತೆ. ಅದು ಮುನಿಯಪ್ಪ ಅವರ ವೈಯಕ್ತಿಕ ವಿಚಾರ, ಅವರ ಭಾವನೆ ಆಗಿದೆ. ಪಕ್ಷ ಮುನಿಯಪ್ಪ ಅವರ ಕೈಯಲ್ಲಿ ಇಲ್ಲ. ಪಕ್ಷದ ಹೈ ಕಮಾಂಡ್ ಕೈಯಲ್ಲಿದೆ. ಮುನಿಯಪ್ಪ ಕೇಂದ್ರ ಸಚಿವರಾದವರು ಅವರ ಭಾವನೆಗಳನ್ನು ಗೌರವಿಸುತ್ತೇವೆ ಎಂದರು. ಇದನ್ನೂ ಓದಿ: ಗುರುವಾರ ಬೆಳಗ್ಗೆ ಆಯನೂರು ಮಂಜುನಾಥ್ ಕಾಂಗ್ರೆಸ್ಗೆ ಸೇರ್ಪಡೆ
ಇನ್ನು ಸಿಎಂ ಬದಲಾವಣೆ ವಿಚಾರವಾಗಿ ನನಗೇನೂ ಗೊತ್ತಿಲ್ಲ, ಸಿಎಂ ಯಾರಾಗ್ತಾರೆ, ಯಾರು ಮುಂದುವರಿಯಬೇಕು, ಬದಲಾವಣೆ ಆಗ್ತಾರಾ, ಬಿಡ್ತಾರಾ ಅಂತ ಊಹಾಪೋಹಗಳು. ನಂಗೆ ಗೊತ್ತಿಲ್ಲ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ನಿರ್ಣಯ ಮಾಡುವಂತಹ ವಿಷಯ ಅಲ್ಲ ಎಂದು ಯೂಟರ್ನ್ ಹೊಡೆದರು.
5 ವರ್ಷ ಸರ್ಕಾರ ಪೂರೈಸುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದರು. ಸಿಟಿ ರವಿ ಪರಿಸ್ಥಿತಿ ಹಾಗೆ ಕುಮಾರಸ್ವಾಮಿ ಪರಿಸ್ಥಿತಿ ಆಗಿದೆ. ನಾವಿಲ್ಲದೆ ಯಾರೂ ಸರ್ಕಾರ ಮಾಡಲು ಆಗಲ್ಲ ಅಂತ ಆಶಾ ಭಾವನೆ ಹೊಂದಿದ್ರು. ಜನರ ತೀರ್ಮಾನದ ಮುಂದೆ ಸ್ವಾಭಾವಿಕವಾಗಿ ಅವರಿಗೆ ನೋವಾಗಿದೆ. ನಮ್ಮ ಬೆಂಬಲದಿಂದ ಸಮ್ಮಿಶ್ರ ಸರ್ಕಾರ ಬರಬೇಕು ಎಂಬುದು ಕುಮಾರಸ್ವಾಮಿ ಆಶಯ. ಆಸೆ ಪಡುವುದು ಮನುಷ್ಯ ಸಹಜ ಸ್ವಭಾವ ಎಂದರು. ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್
ಈ ವೇಳೆ ರೋಣ ಶಾಸಕ ಜಿಎಸ್ ಪಾಟೀಲ್, ಕಾಂಗ್ರೆಸ್ ಮುಖಂಡ ಬಿಬಿ ಅಸೂಟಿ, ಅಶೋಕ್ ಮಂದಾಲಿ, ಅನಿಲ ಗರಗ, ಸಿದ್ದಲಿಂಗೇಶ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Web Stories