ಬೆಂಗಳೂರು: ಬಿಜೆಪಿಯವರು (BJP) ವಕ್ಫ್ ಮತ್ತು ಬಿಪಿಎಲ್ ಕಾರ್ಡ್ (BPL Card) ವಿಚಾರವಾಗಿ ಸುಮ್ಮನೆ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ (Madhu Bangarappa) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ವಕ್ಫ್ ಮತ್ತು ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ವಕ್ಫ್ ವಿಚಾರದಲ್ಲಿ ಯಾರಿಗೆ ಜಮೀನು ಸೇರಬೇಕೋ ಅವರಿಗೆ ಸೇರುತ್ತದೆ. ಯಾರೋ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಸುಳ್ಳು. ಈ ಬಗ್ಗೆ ದಾಖಲಾತಿ ಇರುತ್ತದೆ. ಯಾರು ತೆಗೆದುಕೊಂಡು ಹೋಗಿಲ್ಲ. ಎಲ್ಲದ್ದಕ್ಕೂ ಕಾನೂನು ಇದೆ. ಬಿಜೆಪಿಯವರು ಪ್ರಚಾರ ಮಾಡಿಕೊಂಡು ಜನರಿಗೆ ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚುನಾವಣೆ ಮುಗೀತು, ಈಗ ಬಿಜೆಪಿಯವರು ಕಡಿಮೆ ಮಾಡ್ತಾರೆ. ಫಲಿತಾಂಶ ಮುಗಿದ ಮೇಲೆ ಏನ್ ಫಿಟ್ಟಿಂಗ್ ಇಡಬೇಕು ಎಂದು ಯೋಚನೆ ಮಾಡ್ತಾರೆ. ಇದೆಲ್ಲ ನಡೆಯೋದಿಲ್ಲ. ಪ್ರತಿಭಟನೆ ಮಾಡಲಿ, ಊರು ಊರಲ್ಲಿ ಮಾಡಲಿ. ಪಬ್ಲಿಸಿಟಿ ಸಿಗಲಿ ಎಂದು ಮಾಡ್ತಿದ್ದಾರೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಬಿಪಿಎಲ್ ಕಾರ್ಡ್ ಅರ್ಹತೆ ಇದ್ದವರಿಗೆ ಯಾರಿಗೂ ರದ್ದು ಆಗುವುದಿಲ್ಲ. ಕಾರ್ಡ್ ರದ್ದಾದ್ರೆ, ನಾನು ಶಾಸಕ ನನ್ನನ್ನ ಜನ ಬಿಡ್ತಾರಾ? ಕ್ಯಾನ್ಸಲ್ ಆಗಿದ್ರೆ ನಾನು ಕೊಡಿಸುತ್ತೇನೆ. ಸಿಎಂ ಕೂಡಾ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದಿದ್ದಾರೆ. ಅರ್ಹತೆ ಇದ್ದವರಿಗೆ ಕ್ಯಾನ್ಸಲ್ ಆದ್ರೆ ಕೊಡಿಸೋಕೆ ಶಾಸಕರು ಇದ್ದಾರೆ. ಯಾರು ಭಯ ಪಡಿವುದು ಬೇಡ. ಅರ್ಹರಿಗೆ ಕಾರ್ಡ್ ರದ್ದಾಗಲ್ಲ ಎಂದು ಭರವಸೆ ನೀಡಿದ್ದಾರೆ.