– ನಮ್ಮ ಕ್ಷೇತ್ರದಲ್ಲಿ ಎಲ್ಲೂ ಮೋದಿ ಹವಾ ಕಾಣ್ತಿಲ್ಲ
ಶಿವಮೊಗ್ಗ: ಈ ಬಾರಿ ನಮ್ಮ ಕ್ಷೇತ್ರದಲ್ಲಿ ಎಲ್ಲೂ ಮೋದಿ ಹವಾ ಕಾಣುತ್ತಿಲ್ಲ ಎಂದು ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸ ಕಾಣುತ್ತಿದೆ. ಚುನಾವಣಾ ಪ್ರಚಾರದ (Lok Sabha Election 2024) ವೇಳೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಬಾರಿ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ನನಗೆ ಬಹಳ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈಗ ನಾವು ಏನು ಕೆಲಸ ಮಾಡಬೇಕು, ಯಾವ ರೀತಿ ಪ್ರಚಾರ ಮಾಡಬೇಕು ಆ ರೀತಿ ಮಾಡುತ್ತಿದ್ದೇವೆ. ನನಗೆ ಜನರ ಜೊತೆ ಇರಲು ಇಷ್ಟ. ನನ್ನ ಎದುರಾಳಿ ಯಾರು ಎಂದು ಯೋಚನೆ ಮಾಡಲ್ಲ. ನಾನು ನನ್ನ ಪ್ರಚಾರ ಅಷ್ಟೇ ಮಾಡ್ತಿದ್ದೇನೆ. ನಾನು ವೀಕ್ ಅಭ್ಯರ್ಥಿ ಅಲ್ಲ, ನನ್ನ ಸ್ಪರ್ಧೆಯಿಂದ ಅವರಿಗೆ ಭಯ ಆಗಿದೆ. ಶಿವರಾಜ್ಕುಮಾರ್ ಅಭಿಮಾನಿಗಳು ನನಗೆ ಬೆಂಬಲ ಕೊಡುತ್ತಿದ್ದಾರೆ. ಫಿಲಂ ಛೇಂಬರ್ನವರು ಪ್ರಚಾರಕ್ಕೆ ಬರುತ್ತಿದ್ದಾರೆ. ಶಿವರಾಜ್ ಕುಮಾರ್ (Shiva Rajkumar) ಅವರಿಗೆ ನಾನು ತಪ್ಪು ಮಾಡಲ್ಲ ಎಂದು ಗೊತ್ತು. ಹೀಗಾಗಿಯೇ ಅವರು ಯಾವಾಗಲೂ ನನಗೆ ಬೆಂಬಲ ಕೊಡುತ್ತಾರೆ ಎಂದಿದ್ದಾರೆ.
ಚುನಾವಣಾ ಪ್ರಚಾರದ ನಡುವೆ ಸಕ್ರೈಬೈಲು ಆನೆ ಬಿಡಾರಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದ್ದಾರೆ. ಕುಟುಂಬಸ್ಥರೊಂದಿಗೆ ಆನೆ ಬಿಡಾರಕ್ಕೆ ಭೇಟಿ ನೀಡಿ ಸ್ವಲ್ಪ ಸಮಯ ಅಲ್ಲಿ ಕಾಲ ಕಳೆದಿದ್ದಾರೆ. ಆನೆ ಸವಾರಿ, ತುಂಗಾ ಹಿನ್ನಿರಿನಲ್ಲಿ ಬೋಟಿಂಗ್ ಮಾಡಿ ಕೊಂಚ ರಿಲೀಫ್ ಆಗಿದ್ದಾರೆ. ಈ ವೇಳೆ ಶಿವಣ್ಣ ದಂಪತಿಗೆ ಸಚಿವ ಮಧು ಬಂಗಾರಪ್ಪ ಸಾಥ್ ನೀಡಿದ್ದಾರೆ. ಏ.15 ರಂದು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ.