ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಗಟ್ಟಿ ರಾಜ್ಯ ಕರ್ನಾಟಕ. ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಪತಾಕೆ ಹಾರಿಸಿದ್ದು ಕರ್ನಾಟಕದಲ್ಲಿಯೇ. ಬದಲಾದ ರಾಜಕೀಯ ಗುದ್ದಾಟದಲ್ಲಿ ಈಗ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಅಧಿಕಾರದ ಗದ್ದುಗೆಯನ್ನ ಬಿಟ್ಟುಕೊಡಬಾರದೆಂಬುದು ಬಿಜೆಪಿಯ ಮಹಾದಾಸೆ. ಅದಕ್ಕಾಗಿಯೇ ಯಡಿಯೂರಪ್ಪ ನಂತರದ ನಾಯಕತ್ವ ಹುಡುಕಾಟ ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ.
ಬಿಜೆಪಿಯ ಮಾಸ್ ಲೀಡರ್ ಯಡಿಯೂರಪ್ಪ ನಂತರ ಯಾರೋ ಅನ್ನೋ ಚಿಂತನೆಯಲ್ಲಿ ಬಿಜೆಪಿ ಹೈಕಮಾಂಡ್ ತಂತ್ರಗಳನ್ನ ಹುಡುಕುತ್ತಿದೆ. ಯಡಿಯೂರಪ್ಪ ನಂತರವೂ ಬಿಜೆಪಿ ಮತ್ತಷ್ಟು ಗಟ್ಟಿ ಮಾಡಬೇಕು ಅನ್ನೋ ದೂರದೃಷ್ಟಿ. ಯಡಿಯೂರಪ್ಪ ಜಾಗಕ್ಕೆ ತಕ್ಕನಾದ ಮಾಸ್ ಇಲ್ಲದಿದ್ದರೂ ಕ್ಯಾಸ್ಟ್ ಬೇಸ್ ಇರಬೇಕು ಅನ್ನೋದು ಹೈಕಮಾಂಡ್ ಲೆಕ್ಕಾಚಾರ. ಹಾಗಾಗಿಯೇ ಯಡಿಯೂರಪ್ಪ ನಂತರದ ಉತ್ತರಾಧಿಕಾರಿ ತಲಾಶ್ ಗೆ ಒಳಗೊಳಗೆ ತಂತ್ರ ನಡೆದಿದೆ. 6 ಉತ್ತರಾಧಿಕಾರಿ ಶಕ್ತ ವ್ಯಕ್ತಿಗಳನ್ನ ಹುಡುಕಲು ಹೈಕಮಾಂಡ್ ವೇದಿಕೆ ರೆಡಿ ಮಾಡಿದೆ ಎನ್ನಲಾಗಿದೆ. ಲಿಂಗಾಯತ ಸಮುದಾಯದಿಂದ ಮೂವರು ಲೀಡರ್, ಇನ್ನುಳಿದಂತೆ ಒಕ್ಕಲಿಗ, ದಲಿತ, ಎಸ್ ಟಿ ಸಮುದಾಯದಿಂದ ಮೂವರನ್ನು ಹುಡುಕುವ ಬಗ್ಗೆ ತಂತ್ರಗಾರಿಕೆ ನಡೆದಿದೆ ಅನ್ನೋದು ಬಿಜೆಪಿ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ.
2023ರ ನಾಯಕತ್ವ ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಉತ್ತರಾಧಿಕಾರಿ ಹುಡುಕಾಟದ ಸರ್ವೇ ಶುರುವಾಗಿದೆ ಅಂತೆ. ಅಮಿತ್ ಶಾ, ಮೋದಿ ಅವರ ಟೀಂನಿಂದ ರಹಸ್ಯವಾಗಿ ಉತ್ತರಾಧಿಕಾರಿ ಶಕ್ತ ವ್ಯಕ್ತಿಗಳ ಪಿಕ್ಕಿಂಗ್ ಶುರು ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ 2020ರ ಮಧ್ಯದಲ್ಲೇ ಆ ಉತ್ತರಾಧಿಕಾರಿ ಪಿಕ್ಕಿಂಗ್ ಪೂರ್ಣವಾಗುತ್ತಾ? 2023ರ ಎಲೆಕ್ಷನ್ ಹೊತ್ತಿಗೆ ಯಡಿಯೂರಪ್ಪ ಉತ್ತರಾಧಿಕಾರಿ ಸಿದ್ಧವಾಗ್ತಾರಾ? ಇಲ್ಲ ಅದಕ್ಕೂ ಮೊದಲೇ ರೆಡಿ ಮಾಡ್ತಾರಾ? ಈ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.