ಕೋಲಾರ: ಸಮ್ಮಿಶ್ರ ಸರ್ಕಾರವನ್ನ ಉರುಳಿಸಬೇಕೆಂದು ಬಿಜೆಪಿ ಹೈಕಮಾಂಡ್ ದೆಹಲಿಯಿಂದ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ಕೊಟ್ಟಿದೆ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಉರುಳಿಸುವುದಕ್ಕೆ ಬಿಜೆಪಿ ವರಿಷ್ಟರು ಸೂಚನೆ ನೀಡಿದ್ದಾರೆಂದು ಅಲ್ಲಿನ ನಾಯಕರೇ ನನಗೆ ಮಾಹಿತಿ ನೀಡಿದ್ದಾರೆ. ಇನ್ನು ಮೈತ್ರಿ ಸರ್ಕಾರ ಈಗ ಸುಭದ್ರವಾಗಿ ನಡೆಯುತ್ತಿದ್ದರೂ ಪ್ರತಿಪಕ್ಷಗಳು ಮಾತ್ರ ಸರ್ಕಾರವನ್ನ ಉರುಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಜನರಿಗೆ ಬಿಜೆಪಿ ಬಗ್ಗೆ ತಪ್ಪು ಸಂದೇಶ ಹೋಗಬಾರದೆಂದು ನಾವು ಸರ್ಕಾರ ಬೀಳಿಸಲ್ಲ. ಅದಾಗಿಯೇ ಬೀಳುತ್ತದೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಎರಡು ಮೂರು ದಿನಗಳಿಂದ ಬಿಜೆಪಿ ಅವರ ಹೇಳಿಕೆಗಳನ್ನ ಗಮನಿಸಿದ್ದೇನೆ, ನಾವು ಸರ್ಕಾರ ಉರುಳಿಸುವುದಕ್ಕೆ ಹೋಗುವುದಿಲ್ಲ ಎಂದು ಜನರನ್ನ ನಂಬಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಅಂದರೆ ಕಳೆದ 10 ತಿಂಗಳಿನಿಂದ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನರ ದಿಕ್ಕನ್ನ ತಪ್ಪಿಸಲು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರವನ್ನ ಉರುಳಿಸಲು ಈ ಪ್ರಯತ್ನ ಇವತ್ತು ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.