ಬೆಂಗಳೂರು: ಕೋವಿಡ್ 19 ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದೆ.
ಕೋವಿಡ್ ಮೂರನೇ ಅಲೆ ತಗ್ಗುವ ತನಕ ಯಾರೂ ಜನ ಸೇರಿಸುವ ಕಾರ್ಯಕ್ರಮ ಮಾಡಬಾರದು. ಜನ ಸೇರಿರುವ ಕಾರ್ಯಕ್ರಮ, ಸಭೆಗಳಿಂದ ದೂರ ಇರಿ ಎಂದು ನಾಯಕರಿಗೆ ಖಡಕ್ ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮವನ್ನು ಆಯೋಜಿಸಬಾರದು ಎಂದು ಫರ್ಮಾನು ಹೊರಡಿಸಿದೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್
ಡಿಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆಯನ್ನು ರಾಜ್ಯ ಬಿಜೆಪಿ ವಿರೋಧಿಸಿ ಕೊರೊನಾ ಹರಡುವ ಕಾರ್ಯಕ್ರಮ ಎಂದು ವ್ಯಂಗ್ಯವಾಡುತ್ತಿದೆ. ಆದರೆ ರೇಣುಕಾಚಾರ್ಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದು, ಸುಭಾಷ್ ಗುತ್ತೇದಾರ್ ಬೆಂಬಲಿಗರ ಪ್ರತಿಭಟನೆಯಿಂದ ರಾಜ್ಯ ಬಿಜೆಪಿಗೆ ಮುಜುಗರವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಇರಿ ಎಂದು ಸೂಚಿಸಿದೆ.
ರೇಣುಕಾಚಾರ್ಯ, ಗುತ್ತೇದಾರ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಮ್ಮ ಮೇಲೆ ಪ್ರತ್ಯಾಸ್ತ್ರ ಪ್ರಯೋಗ ಮಾಡುತ್ತಿದೆ. ಕಾಂಗ್ರೆಸ್ ಪಾದಯಾತ್ರೆಯನ್ನು ಟೀಕಿಸಿ ದಾಳಿ ನಡೆಸುತ್ತಿರುವಾಗ ನಮ್ಮ ಪಕ್ಷದವರೇ ವಿಪಕ್ಷಗಳಿಗೆ ಅಸ್ತ್ರ ಕೊಟ್ಟಿದ್ದಾರೆ ಎಂದು ಹಿರಿಯ ನಾಯಕರು ಗರಂ ಆಗಿದ್ದಾರೆ. ಹೀಗಾಗಿ ಮತ್ತೆ ನಮಗೆ ಮುಜುಗರವಾಗಬಾರದು ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗದೇ ಇರಲು ರಾಜ್ಯ ಬಿಜೆಪಿ ಘಟಕದಿಂದ ಎಲ್ಲರಿಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚನೆ ರವಾನಿಸಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಬಲಗುರಿ ಗ್ರಾಮದ ದುರ್ಗಾಂಬಿಕೆ ದೇವಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಅಳಂದ ಶಾಸಕ ಸುಭಾಷ್ ಗುತ್ತೇದಾರ್ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು.