ಗದಗ: ಅಕ್ಕಿ ಕೊಡಲು ಬಹಳ ಪ್ರಯತ್ನ ಮಾಡಿದ್ವಿ. ಆದರೆ ಆಗಲಿಲ್ಲ. ಅದಕ್ಕೆ ಬಿಜೆಪಿಗರು ಕಲ್ಲು ಹಾಕಿದ್ರು. ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕೋ ನಿರ್ಧಾರ ಮಾಡಿದ್ದೇವೆ. ಆದರೆ ಈಗ ಮಾರ್ಕೆಟ್ ದರ 60 ರೂ. ಕೊಡಿ ಎಂದು ಜನರ ಮನಸ್ಸು ಕೆಡಿಸುವ ಕೆಲಸ ಮಾಡಬೇಡಿ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಹೆಚ್ಕೆ ಪಾಟೀಲ್ (HK Patil) ಹೇಳಿದರು.
ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರ ನೀಡುತ್ತೇವೆ ಎಂದರೂ ಕೇಂದ್ರಕ್ಕೆ ಕರ್ನಾಟಕದ ಬಡವರ ಬಗ್ಗೆ ಅನುಕಂಪ ಮೂಡಲಿಲ್ಲ. ಅನ್ನಭಾಗ್ಯ (Anna Bagya Yojana) ಹೇಗಾದ್ರೂ ಮಾಡಿ ನಿಲ್ಲಿಸಬೇಕು ಎಂಬುದರ ಬಗ್ಗೆ ಲಕ್ಷ್ಯ ವಹಿಸುತ್ತಿದ್ದಾರೆಯೇ ವಿನಃ ಅದಕ್ಕೆ ಸಹಕಾರ, ಬಡವರಿಗೆ ಅನುಕೂಲದ ಮಾತು ಬಿಜೆಪಿಗರ ಬಾಯಿಂದ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಕಿ ಕೆಜಿಗೆ 60 ರೂ. ಕೊಡುವ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮಾರುಕಟ್ಟೆಯಲ್ಲಿ 60 ರೂ. ಇದೆಯಾ? ಜವಾಬ್ದಾರಿ ಸ್ಥಾನದಲ್ಲಿರುವ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಬೊಮ್ಮಾಯಿ ಅವರು ಮಾರುಕಟ್ಟೆಗೆ ಹೋಗಿ ನೋಡಿ. ಆಗ ಅಕ್ಕಿಯಲ್ಲಿ ಕಲ್ಲು ಹಾಕಿದ್ರಿ, ಈಗ ಹಣ ಕೊಡುವುದರಲ್ಲೂ ಜನರ ಮನಸ್ಸು ಕೆಡಿಸುವ ಕೆಲಸ ಮಾಡ್ತಿದ್ದಿರಾ? ಎಫ್ಸಿಐ ನವರು ಖಾಸಗಿಯವರಿಗೆ ಕೊಡುವುದು ಮಾರ್ಕೆಟ್ ದರ ಅಲ್ವಾ? 60 ರೂ. ಇದ್ರೂ ಖಾಸಗಿಯವರಿಗೆ 32 ರೂ. ಯಾಕೆ ಕೊಡ್ತಿರಿ? ಅದರ ಬಗ್ಗೆ ಸ್ಪಷ್ಟನೆ ನೀಡಿ. ಸುಳ್ಳಿಗೂ ಒಂದು ಮಿತಿ ಇದೆ. ಒಂದು ತಿಂಗಳ ಹಿಂದೆಯೇ ಜನರು ನಿಮಗೆ ಉತ್ತರ ಕೊಟ್ಟಿದಾರೆ. ಇನ್ನು ಮುಂದಾದರೂ ಪಾಠ ಕಲಿಯಿರಿ ಎಂದು ಟಾಂಗ್ ನೀಡಿದರು.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿಲ್ಲ. ಅದು ಆಹಾರ ಹಕ್ಕು ಕಾನೂನನ್ನು ಮನಮೋಹನ್ ಸಿಂಗ್ ಮಾಡಿದ್ರು. ಆ ಕಾನೂನು ಹಕ್ಕಿನನ್ವಯ ನಮ್ಮ ಹಕ್ಕಾಗಿ ಬರುವ ಅಕ್ಕಿ ಕೊಡುತ್ತೇವೆ ಎಂದು ತಿರುಚಿದರು. ಇನ್ನು ಧಾನ್ಯಗಳ ಬೆಲೆ ಏರಿಕೆಗೆ ಕೇಂದ್ರ ಕಾರಣ ಎಂದರು. ನಾಚಿಕೆ ಆಗಬೇಕು, ಬಡವರಿಗೆ ಇಷ್ಟೊಂದು ದ್ರೋಹನಾ? ನಿಮ್ಮ ನೀತಿ ಏನು? ನಿಮ್ಮ ವರ್ತನೆ, ನಿಲುವುಗಳನ್ನು ಜನ ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ನೋಟಿಸ್
ಕೇಂದ್ರದ ತಪ್ಪು ನೀತಿಯಿಂದ ಧಾನ್ಯಗಳ ದರ ಏರುತ್ತಿದೆ. ಬಡವರ ಬದುಕು ಆರ್ಥಿಕವಾಗಿ ದುಸ್ತರವಾಗುತ್ತಿದೆ. ಬಡವರ ಅಡಚಣೆ ನೀಗಿಸಲು ಗೃಹ ಲಕ್ಷ್ಮಿ ತಂದಿದ್ದೇವೆ. ಜುಲೈ 14 ರಂದು ತಾತ್ಕಾಲಿಕ ಕೆಲಸ ಆರಂಭ ಮಾಡುತ್ತೇವೆ ಎಂದು ಹೆಚ್ಕೆ ಪಾಟೀಲ್ ತಿಳಿಸಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ 1 ರೂಪಾಯಿ ಖರ್ಚು ಮಾಡೋದು ಬೇಡ: ಲಕ್ಷ್ಮಿ ಹೆಬ್ಬಾಳ್ಕರ್
Web Stories