– ಸರ್ಕಾರ ಬೀಳಲು ಮಾಧ್ಯಮದವರೇ ಕಾರಣ – ಅಮರೇಗೌಡ ಬಯ್ಯಾಪೂರ
ಬೆಂಗಳೂರು: ಸಮಿಶ್ರ ಸರ್ಕಾರ ಬಂದಾಗಿಂದ ಬಿಜೆಪಿಯವರು ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಅತೃಪ್ತರು ಮುಂಬೈಗೆ ತೆರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದೇ ಬಿಜೆಪಿಯವರು ಎಂದು ಮಾಜಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿರುವ ತಮ್ಮ ನಿವಾಸಕ್ಕೆ ಆಪ್ತರನ್ನು ಕರೆಸಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ವರ್ಷಾನುಗಟ್ಟಲೆ ಕಾಂಗ್ರೆಸ್ ನಲ್ಲಿದ್ದವರೂ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟವರನ್ನು ಎಷ್ಟರ ಮಟ್ಟಿಗೆ ಮನವೊಲಿಸಲು ಪ್ರಯತ್ನಿಸಿ ಯಶಸ್ವಿಯಾಗುತ್ತೇವೋ ನೋಡಬೇಕು. ಬಿಜೆಪಿಯವರು 14 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ರಾಜ್ಯದ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ತಿಳಿಸಿದರು.
ಚುನಾಯಿತ ಸರ್ಕಾರವನ್ನು ಕುಸಿಯುವಂತೆ ಮಾಡುವಲ್ಲಿ ಬಿಜೆಪಿ ಸದಾ ಪ್ರಯತ್ನ ಮಾಡುತ್ತಿದೆ. ಶಾಸಕರನ್ನು ಹೆದರಿಸಿ, ಬೆದರಿಸುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೋ ಇಲ್ಲವೋ ಎಂಬ ಆತಂಕ ಆಗಿದೆ. ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಕಿಡಿಕಾರಿದರು.
ಮಾತುಕತೆಯ ಬಳಿಕ ಖರ್ಗೆ ನಿವಾಸದ ಎದುರು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪದೇ ಪದೇ ಹೇಳುತ್ತಿದ್ದೇನೆ. ನಾನು ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ನಲ್ಲೇ ಇರುತ್ತೇನೆ. ಮಾಧ್ಯಮಗಳೇ ಇಷ್ಟಕ್ಕೆಲ್ಲ ಕಾರಣ. ನಾನು ಬಿಜೆಪಿ ಹೋಗುವ ಸಂಭವವಿಲ್ಲ ಎಂದು 10 ಬಾರಿ ಹೇಳಿದ್ದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆಯಲ್ಲ. ಆದರೂ ಕೆಲವು ಮಾಧ್ಯಮಗಳು ಶನಿವಾರ ಕೂಡ ನನ್ನ ಹೆಸರು ತೊರಿಸಿದ್ದರು. ನಾನು ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಇದ್ದೇನೆ. ಮುಖಂಡರು ಏನು ಹೇಳುತ್ತಾರೋ ಅದೇ ಮಾಡುತ್ತೇನೆ. ಸರ್ಕಾರ ಬೀಳಲಿಕ್ಕೆ ಮಾಧ್ಯಮದವರೇ ಕಾರಣ ಎಂದು ಮೀಡಿಯಾ ವಿರುದ್ಧ ಗರಂ ಆದರು.