ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ನಿರ್ಮಾಣ ವಿರೋಧಿಸಿ ರೈತರು ತಮ್ಮ ಹೋರಾಟ ಮುಂದುವರಿಸಿದ್ದಾರೆ. ನಮ್ಮದು ರೈತರ ಪಕ್ಷ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಇದು ರೈತರ ಸರ್ಕಾರ ಅಲ್ಲ ರೈತರನ್ನು ಮಣ್ಣಾಗ ಹಾಕೋ ಸರ್ಕಾರ ಎಂದು ಬೆಳಗಾವಿಯಲ್ಲಿ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕಾಮಗಾರಿಗೆ ಹೈಕೋರ್ಟ್ ಅನುಮತಿ ಕೊಟ್ಟಿಲ್ಲ ಎಂದು ರೈತರು ವಾದಿಸುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳು ಮಾತ್ರ ಹೈಕೋರ್ಟ್ ಕಾಮಗಾರಿ ಆರಂಭಿಸಲು ಕಾನೂನಾತ್ಮಕ ಅನುಮತಿ ಕೊಟ್ಟಿದೆ ಎಂದು ಹೇಳುತ್ತಿದ್ದಾರೆ. ರೈತರ ತೀವ್ರ ವಿರೋಧದ ನಡುವೆಯೂ ಮಂಗಳವಾರದಿಂದ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಿಂದ ಹಲಗಾವರೆಗೆ 9.5 ಕಿಮೀ ಬೈಪಾಸ್ ರಸ್ತೆ ಕಾಮಗಾರಿಗೆ ಪ್ರಾರಂಭವಾಗಿದೆ. ಪ್ರಕರಣದ ಸಂಬಂಧ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿರುವ ನೊಂದ ರೈತರು ಕಾಮಗಾರಿ ನಿಲ್ಲಿಸುವಂತೆ ಡಿಸಿಗೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಾಗುವುದಿಲ್ಲ: ದೇವಗನ್ಗೆ ಸಿದ್ದು ತಿರುಗೇಟು
ಬಳಿಕ ಮಾತನಾಡಿದ ರೈತ ಮುಖಂಡ ರಾಜು ಮರವೆ, ಸ್ಟೇ ರದ್ದಾಗಿದೆ ಎಂದು ಹೇಳುತ್ತಿದ್ದಾರೆ. ಹೈಕೋರ್ಟ್ ಬಿಟ್ಟು ಒಂದು ಬೇರೆ ಕಮಿಟಿ ಮಾಡಿದ್ದಾರೆ. ಆ ಕಮಿಟಿಯಲ್ಲಿ ಠರಾವು ಪಾಸ್ ಮಾಡಿ ತಡೆಯಾಜ್ಞೆ ತೆರವುಗೊಳಿಸಿದ್ದಾರೆ. ಕೋರ್ಟ್ನಲ್ಲಿ ಆಗಿದ್ದರೆ ನಮ್ಮ ವಕೀಲರು ನೋಟಿಸ್ ಕೊಡುತ್ತಿದ್ದರು. ಈ ತಡೆಯಾಜ್ಞೆ ಯಾವುದೇ ಕಾರಣಕ್ಕೂ ತೆರವು ಆಗೋದಿಲ್ಲ. 50 ರೈತರ ಕೇಸ್ ಇತ್ಯರ್ಥ ಆಗೋವರೆಗೂ ಯಾವುದೇ ಕಾರಣಕ್ಕೂ ಹೊಲದಲ್ಲಿ ಒಂದು ಕಡ್ಡಿ ಕೂಡ ಮುಟ್ಟುವ ಹಾಗಿಲ್ಲ ಎಂಬ ನಿಯಮವಿದೆ. ಆದರೂ ಸಹ ಸ್ಟೇ ತಂದು ನಮ್ಮ ಕಣ್ಣಾಗ ಮಣ್ಣು ಹಾಕಿ ಕೆಲಸ ಶುರು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ನವರು ದೇವೇಗೌಡರಿಗೆ ತುಮಕೂರಿನಲ್ಲಿ ವಿಷ ಕೊಟ್ಟರು: ಸಿಎಂ ಇಬ್ರಾಹಿಂ
ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ನಮ್ಮದು ರೈತರ ಪಕ್ಷ ಎಂದು ಹೇಳುತ್ತಾರೆ. ಆದರೆ, ಇದು ರೈತರ ಸರ್ಕಾರ ಅಲ್ಲ ಈ ಬಿಜೆಪಿ ಸರ್ಕಾರ ರೈತರನ್ನು ಮಣ್ಣಾಗ ಹಾಕೋ ಸರ್ಕಾರ. ನಮ್ಮ ಮೇಲೆ ಪೊಲೀಸರು ಗುಂಡು ಹಾಕಿ ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಅನಿಲ್ ಅನಗೋಳ್ಕರ್ ಮಾತನಾಡಿ, ನಮಗೆ ಯಾವುದೇ ಮಾಹಿತಿ ನೀಡದೇ ಕೆಲಸ ಶುರು ಮಾಡಿದ್ದಾರೆ. ಬೆಳೆ ನಾಶ ಮಾಡುವ ಅವಶ್ಯಕತೆಯೇ ಇರಲಿಲ್ಲ. ಅವರೇ ಮಾಡಿದ ರಸ್ತೆ ಇತ್ತು, ಅದರಲ್ಲಿ ಹೋಗಬಹುದಿತ್ತು. ಒಬ್ಬ ಮನುಷ್ಯನ ಎತ್ತರಕ್ಕೆ ಬೆಳೆದಿದ್ದ ಕಬ್ಬನ್ನು ಹಾಳು ಮಾಡಿದ್ದಾರೆ. ಹೋದ ವರ್ಷದ ಬೆಳೆ ನಾಶಕ್ಕೆ ಪರಿಹಾರ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರೂ ಆದ್ರೆ ಕೊಟ್ಟಿಲ್ಲ. ಈ ಬಾರಿಯೂ ಹೀಗೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಇದನ್ನೂ ಓದಿ: ರಾಗಿ ಖರೀದಿ ಕೇಂದ್ರದಲ್ಲಿ ಗೋಲ್ಮಾಲ್ – ಕೇಂದ್ರಕ್ಕೆ ಬೀಗ ಜಡಿದ ರೈತರು