ಗಾಂಧೀನಗರ: ಗುಜರಾತ್ನ (Gujrat) ಮೋರ್ಬಿ (Morbi) ಸೇತುವೆಯಲ್ಲಿ ಸಂಭವಿಸಿದ ದುರಂತದಲ್ಲಿ ನದಿಗೆ ಹಾರಿ ಜನರ ಜೀವ ಉಳಿಸಿದ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾ (Kantilal Amrutiya) ಅವರನ್ನು ಮೊರ್ಬಿಯಿಂದ ಬಿಜೆಪಿ ಕಣಕ್ಕಿಳಿಸಿದೆ. ಈ ಬಾರಿ ವಿಧಾನಸಭೆ ಚುನಾವಣೆಯಿಂದ ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ (Brijesh Merja) ಅವರನ್ನು ಕೈಬಿಡಲಾಗಿದೆ.
ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ಸೇತುವೆಯ ಕೇಬಲ್ಗಳು ಮುರಿದು ಬಿದ್ದು, ಅನೇಕ ಮಂದಿ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ಅಮೃತಿಯಾ ಅವರು ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೀರಿನಲ್ಲಿ ಸಿಲುಕಿದವರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಕಾಂತಿಲಾಲ್ ಅಮೃತಿಯಾ ಅವರ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ಅವರ ಕಾರ್ಯವನ್ನು ಮೆಚ್ಚಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ “ಟಿಕೆಟ್” ನೀಡಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್ನ ಜಮ್ನಗರ ಉತ್ತರದಿಂದ ಬಿಜೆಪಿ ಟಿಕೆಟ್
ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಈ ಹಿಂದೆ ಕಾಂತಿಲಾಲ್ ಅಮೃತಿಯಾ ಅವರ ಹೆಸರು ಇರಲಿಲ್ಲ. ಆದರೀಗ ಅವರ ಧೈರ್ಯಕ್ಕೆ ಮೆಚ್ಚಿ, ಪ್ರತಿಫಲವಾಗಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ