ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ, ಪ್ರತಿಷ್ಠೆಯ ಪ್ರಶ್ನೆ ಎಂದೇ ಪರಿಗಣಿಸಲಾಗಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕಮಲ ಪಾಳಯ ಈಗ ಕಾರಣ ಹುಡುಕಲು ಮುಂದಾಗಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಪರಾಭವಕ್ಕೆ ಮೂಲವಾಗಿದ್ದು ಏನು ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚುನಾವಣಾ ಉಸ್ತುವಾರಿ ಹೊತ್ತಿದ್ದ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ನಂಜನಗೂಡಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ರನ್ನು ಗೆಲ್ಲಿಸುವ ಹೊಣೆಗಾರಿಕೆ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಮೇಲಿತ್ತು. ಅದೇ ರೀತಿ ಗುಂಡ್ಲುಪೇಟೆಯ ಜವಾಬ್ದಾರಿಯನ್ನು ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಸಿ.ಟಿ.ರವಿಗೆ ಹಂಚಲಾಗಿತ್ತು. ಈಗ ಈ ನಾಲ್ವರೂ ಪಕ್ಷ ಯಾಕೆ ಮುಗ್ಗುರಿಸಿತು ಎಂಬ ಬಗ್ಗೆ ಕಾರಣಗಳನ್ನು ಪಟ್ಟಿ ಸಲ್ಲಿಸಬೇಕಾಗಿದೆ. ಆ ವರದಿಯನ್ನು ಆಧರಿಸಿ ಯಡಿಯೂರಪ್ಪ ಹೈಕಮಾಂಡ್ಗೆ ವಿವರಣೆ ನೀಡಲಿದ್ದಾರೆ.
ಇತ್ತ ವಿಜಯದ ಖುಷಿಯಲ್ಲಿ ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಲಿದ್ದಾರೆ.